ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಿಂದ ಐಪಿಎಲ್ ಪಂದ್ಯಗಳು ಸ್ಥಳಾಂತರವಾಗಲು ಬಿಡಲ್ಲ. ಪಂದ್ಯಗಳು ಇಲ್ಲೇ ನಡೆಸುವಂತೆ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಭಾನುವಾರ ಕೆ.ಎಸ್.ಸಿ.ಎ ಚುನಾವಣೆಯಲ್ಲಿ ಮತದಾನ ಮಾಡಿದ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಇದು ಕರ್ನಾಟಕ ರಾಜ್ಯ ಹಾಗೂ ಬೆಂಗಳೂರಿನ ಗೌರವದ ವಿಚಾರ. ಮುಂದಿನ ಐಪಿಎಲ್ ಪಂದ್ಯಗಳನ್ನು ಇಲ್ಲೇ ನಡೆಸುವಂತೆ ಕ್ರಮ ಕೈಗೊಳ್ಳುತ್ತೇವೆ. ಮುಂದಿನ ದಿನಗಳಲ್ಲಿ ಯಾವೆಲ್ಲಾ ಪಂದ್ಯಗಳಿವೆಯೋ ಅದಕ್ಕೆ ಅವಕಾಶ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ನಾನು ಕ್ರಿಕೆಟ್ ಅಭಿಮಾನಿ. ಇತ್ತೀಚಿಗೆ ಆಗಿರುವ ಅನಾಹುತ ಮುಂದೆ ಮರುಕಳಿಸದಂತೆ ಎಚ್ಚರಿಕೆ ವಹಿಸಿ ಕ್ರೀಡಾಂಗಣದ ಗೌರವ ಉಳಿಯುವಂತೆ ಮಾಡುತ್ತೇವೆ. ಕಾನೂನು ಚೌಕಟ್ಟಿನಲ್ಲಿ ಜನದಟ್ಟಣೆ ನಿಭಾಯಿಸಿಕೊಂಡು ಕ್ರೀಡಾಂಗಣ ಬೆಳೆಸಲಾಗುವುದು. ಇದರ ಜೊತೆಗೆ ಪರ್ಯಾಯವಾಗಿ ದೊಡ್ಡ ಕ್ರೀಡಾಂಗಣವನ್ನು ನಿರ್ಮಾಣ ಮಾಡುತ್ತೇವೆ ಎಂದು ತಿಳಿಸಿದರು.
ಕೆ.ಎಸ್.ಸಿ.ಎ ಚುನಾವಣೆಯಲ್ಲಿ ಮತದಾನ ಮಾಡಿರುವ ಬಗ್ಗೆ ಕೇಳಿದಾಗ, ನಾನು ಕೆಎಸ್ ಸಿಎ ಸದಸ್ಯ. ನಾನು ಚಿಕ್ಕ ವಯಸ್ಸಿನಲ್ಲಿದ್ದಾಗಲೇ, ನಾಗರಾಜ್ ಅವರು ನನಗೆ ಸದಸ್ಯತ್ವ ನೀಡಿದರು. ಅವರ ಮಗ ನನ್ನ ಸಹಪಾಠಿ. ನನಗೆ ಬ್ರಿಜೇಶ್ ಪಟೇಲ್ ಅವರಿಂದ ಅನಿಲ್ ಕುಂಬ್ಳೆ, ಪ್ರಸನ್ನ ಸೇರಿದಂತೆ ಅನೇಕರು ಬಹಳ ಪರಿಚಯ. ನನಗೆ ಬೇಕಾದವರಿಗೆ ನಾನು ಮತ ಹಾಕಿದ್ದೇನೆ ಎಂದರು.
