ಬೆಂಗಳೂರು: ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರ ವಿವಿಧ ರೂಪದ ಅಹವಾಲುಗಳನ್ನು ನೇರವಾಗಿ ಆಲಿಸಿ, ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಪ್ರತಿ ಶುಕ್ರವಾರ ಫೋನ್-ಇನ್ ಸಂವಾದವನ್ನು ಆರಂಭಿಸಿದ್ದಾರೆ.
ಈ ವಾರದ ಫೋನ್-ಇನ್ ಕಾರ್ಯಕ್ರಮ ಡಿಸೆಂಬರ್ 12 ರಂದು (ಶುಕ್ರವಾರ) ಬೆಳಿಗ್ಗೆ 7 ರಿಂದ 9 ಗಂಟೆಯವರೆಗೆ ನಡೆಯಲಿದ್ದು, ಈ ವೇಳೆ ನಾಗರಿಕರು ತಮ್ಮ ಸಮಸ್ಯೆಗಳಾದ ರಸ್ತೆ ಗುಂಡಿಗಳು ಮತ್ತು ರಸ್ತೆ ದುರಸ್ತಿ, ಬೀದಿ ದೀಪಗಳ ನಿರ್ವಹಣೆ, ಕಸ ಸಂಗ್ರಹಣೆ/ ವಿಲೇವಾರಿ ಸಂಬಂಧಿತ ತೊಂದರೆಗಳು, ಅಪಾಯಕರ ಮರಗಳು ಮತ್ತು ಕೊಂಬೆಗಳ ತೆರವು, ಸೊಳ್ಳೆ ನಿಯಂತ್ರಣ ಕ್ರಮಗಳು, ಬೀದಿ ನಾಯಿಗಳ ನಿಯಂತ್ರಣ, ಉದ್ಯಾನವನಗಳ ಪಾಲನೆ ಮತ್ತು ಸುಧಾರಣೆ, ಅನಧಿಕೃತ ಬ್ಯಾನರ್ ಮತ್ತು ಪೋಸ್ಟರ್ಗಳ ತೆರವು, ಪಾದಚಾರಿ ಮಾರ್ಗಗಳ ಮೇಲಿನ ಒತ್ತುವರಿ ತೆರವು, ಇ-ಖಾತಾ ಸಂಬಂಧಿತ ಪ್ರಶ್ನೆಗಳು ಮತ್ತು ಚರಂಡಿ ಸಮಸ್ಯೆಗಳು ಮುಂತಾದವುಗಳ ಬಗ್ಗೆ ಆಯುಕ್ತರ ಜೊತೆ ನೇರವಾಗಿ ಹಂಚಿಕೊಂಡು ಕಾರ್ಯಕ್ರಮದ ಸದುಪಯೋಗವನ್ನು ಪಡೆಯಲು ಕೋರಲಾಗಿದೆ.
ಸಲ್ಲಿಸಲಾದ ಪ್ರತಿ ದೂರು ಸಹಾಯ 2.0 ಪೋರ್ಟಲ್ ನಲ್ಲಿ ದಾಖಲಾಗಿ ಸಂಬಂಧಿತ ಅಧಿಕಾರಿಗಳಿಗೆ ತಕ್ಷಣ ಕಳುಹಿಸಲಾಗುತ್ತದೆ. ದೂರು ಸ್ವೀಕರಿಸಿದ ಮಾಹಿತಿ ಮತ್ತು ಅಧಿಕಾರಿಯ ವಿವರಗಳನ್ನು ನಾಗರಿಕರಿಗೆ ಮೆಸೇಜ್ ಮುಖಾಂತರ ತಿಳಿಸಲಾಗುವುದು. ನಿಯಂತ್ರಣ ಕೊಠಡಿ ಮೊಬೈಲ್ ಮತ್ತು ವಾಟ್ಸಪ್ ಸಂಪರ್ಕ ಸಂಖ್ಯೆ 9480685705 ಆಗಿದ್ದು, ಲ್ಯಾಂಡ್ಲೈನ್ ಸಂಖ್ಯೆ 080-22975936/080-23636671 ಯಾಗಿದೆ. ಅದೇ ರೀತಿ ನಾಗರಿಕರು ತಮ್ಮ ಅಹವಾಲುಗಳನ್ನು ಸಹಾಯ 2.0 ಮೊಬೈಲ್ ಆಪ್ ಮೂಲಕವೂ ಸಲ್ಲಿಸಬಹುದಾಗಿದೆ.
