ಶಾಲೆಯ ಸಮೀಪದಲ್ಲಿ ಮದ್ಯದ ಅಂಗಡಿ ತೆರೆದಿರುವುದನ್ನು ಪ್ರಶ್ನಿಸಿ ಐದು ವರ್ಷದ ವಿದ್ಯಾರ್ಥಿಯೊಬ್ಬ ಕಾನ್ಪುರ ನಗರದ ಅಲಹಾಬಾದ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾನೆ.
ವಕೀಲರಾಗಿರುವ ತನ್ನ ತಂದೆ ಮೂಲಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಈ ಸಂಬಂಧ ಹೈಕೋಟ್೯ ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ.
ವಕೀಲರಾಗಿರುವ ತಂದೆ ಪ್ರಸೂನ್ ದೀಕ್ಷಿತ್ ಮೂಲಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವ ಆಜಾದ್ ನಗರದ ಎಂಆರ್ ಜಯಪೂರಿಯಾ ಶಾಲೆಯ ಕಿಂಡರ್ಗಾರ್ಟನ್ ವಿದ್ಯಾರ್ಥಿ ಅಥರ್ವ, “ಪ್ರತಿ ದಿನ ಶಾಲೆಗೆ ಹೋಗುವಾಗ ಕುಡುಕರಿಂದ ಕಿರಿಕಿರಿಯಾಗುತ್ತಿದೆ. ಕುಡುಕರ ಜಗಳದಿಂದಾಗಿ ಓದುವುದಕ್ಕೂ ತೊಂದರೆ ಉಂಟಾಗಿದೆ,” ಎಂದು ಅರ್ಜಿಯಲ್ಲಿ ತಿಳಿಸಿದ್ದಾನೆ.
ಪ್ರಕರಣ ಸಂಬಂಧ ಅಬಕಾರಿ ಇಲಾಖೆ ಕಾರ್ಯದರ್ಶಿ, ಅಬಕಾರಿ ಇಲಾಖೆ ಆಯುಕ್ತರು, ಮದ್ಯದಂಗಡಿ ಮಾಲಿಕರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, “ಒಂದು ಶಾಲೆಯಿದ್ದ ಸ್ಥಳದಲ್ಲಿ ಕಾನೂನು ಮೀರಿ ಮದ್ಯದಂಗಡಿ ತೆರೆಯಲು ಅಧಿಕಾರಿಗಳು ಅದು ಹೇಗೆ ಅನುಮತಿ ನೀಡಿದರು?,” ಎಂದು ಪ್ರಶ್ನಿಸಿದೆ.
ಶಾಲಾ ಪ್ರದೇಶದ 100 ಮೀ. ವ್ಯಾಪ್ತಿಯಲ್ಲಿ ಮದ್ಯದಂಗಡಿ ತೆರೆಯಬಾರದು ಎಂಬ ಸುಪ್ರೀಂ ಕೋರ್ಟ್ ತೀರ್ಪು ಉಲ್ಲೇಖಿಸಿದ ಹೈಕೋರ್ಟ್, ವಿದ್ಯಾರ್ಥಿ ಸಲ್ಲಿಸಿದ ಪಿಐಎಲ್ಗೆ ಉತ್ತರ ನೀಡುವಂತೆ ಅಬಕಾರಿ ಇಲಾಖೆಗೆ ನೋಟಿಸ್ ಜಾರಿ ಮಾಡಿದೆ.
