ಬೆಂಗಳೂರು: ಕೊಲೆ ಯತ್ನ ಆರೋಪ ಪ್ರಕರಣಕ್ಕೆ ಪ್ರತಿಯಾಗಿ ಎಸ್ಸಿ-ಎಸ್ಟಿ (ದೌರ್ಜನ್ಯ) ತಡೆ ಕಾಯ್ದೆ ಅಡಿ ದಾಖಲಿಸಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿ ಆದೇಶಿಸಿದೆ.
ಕೊಲೆ ಯತ್ನದ ಪ್ರಕರಣ ದಾಖಲಾಗಿರುವುದಕ್ಕೆ ಪ್ರತಿಯಾಗಿ ಯಾವುದೇ ಆಧಾರವಿಲ್ಲದೆ ಎಸ್ಸಿ ಎಸ್ಟಿ ಕಾಯ್ದೆಯ ಅನ್ವಯ ಎಫ್ಐಆರ್ ದಾಖಲಿಸಲಾಗಿದೆ ಎಂದು ದೂರಿ ಬೈಲಹೊಂಗಲ ನಿವಾಸಿಗಳಾದ ಅತಾಹುಲ್ಲಾ, ಮೆಹಬೂಬ್ ರಫೀಕ್, ಮೊಹಮ್ಮದ್ ಸಾಧಿಕ್ ಹಾಗೂ ಅಲಂಉಪ್ಪಿಡಿ ಹೈಕೋರ್ಟ್ ಗೆ ಅರ್ಜಿಯನ್ನು ಸಲ್ಲಿಸಿದ್ದರು. ವಿಚಾರಣೆಯನ್ನು ನಡೆಸಿದ ಹೈಕೋರ್ಟ್ ಧಾರವಾಡ ಪೀಠ ಪ್ರಕರಣವನ್ನು ರದ್ದು ಮಾಡಿ ಆದೇಶವನ್ನು ಹೊರಡಿಸಿದೆ.
ಅರ್ಜಿದಾರರು ಎಸ್ಸಿ ಎಸ್ಟಿ ದೂರನ್ನು ದಾಖಲಿಸಿರುವವರ ಮೇಲೆ ಯಾವ ರೀತಿ ಜಾತಿ ನಿಂದನೆಯನ್ನು ಮಾಡಿದ್ದಾರೆ ಎಂಬುವ ನಿರ್ದಿಷ್ಟ ಅಂಶಗಳು ಕಂಡು ಬಂದಿಲ್ಲ. ಬೆಳವಣಿಗೆಗಳನ್ನು ನೋಡಿದರೆ ಕೊಲೆ ಯತ್ನ ಪ್ರಕರಣ ದಾಖಲಿಸಿರುವವರ ವಿರುದ್ಧ ಪ್ರತಿದೂರಾಗಿ ಕಂಡುಬರುತ್ತಿದೆ. ಈ ಹಿಂದೆ ನಡೆದ ವಿಚಾರಣೆ ವೇಳೆ ಎಫ್ಐಆರ್ಗೆ ತಡೆ ನೀಡಲಾಗಿದೆ. ಪ್ರಕರಣ ಮುಂದುವರೆದರೆ ಕಾನೂನು ಪ್ರಕ್ರಿಯೆ ದುರುಪಯೋಗಯಾಗಲಿದೆ ಎಂದು ಹೇಳಿದೆ.
ಪ್ರಕರಣದ ಹಿನ್ನಲೆ: ಚೂರಿ ಇರಿತದ ಪ್ರಕರಣದಿಂದ ತಪ್ಪಿಸಿಕೊಳ್ಳಲು ಆರೋಪಿಗಳು ನಾಲ್ಕು ದಿನಗಳ ಬಳಿಕ ಠಾಣೆಗೆ ಬಂದು ಪ್ರತಿ ದೂರನ್ನು ನೀಡಿದ್ದಾರೆ. ಪೊಲೀಸರು ಕೊಲೆ ಯತ್ನದ ಪ್ರಕರಣವನ್ನು ಆರೋಪಿಗಳ ವಿರುದ್ಧ ದಾಖಲಿಸುವ ಬದಲು ನಮ್ಮ ವಿರುದ್ಧವೇ ಎಫ್ಐಆರ್ ದಾಖಲಿಸಿದ್ದಾರೆ ಎಂದು ಅರ್ಜಿಯನ್ನು ಸಲ್ಲಿಸಿದ್ದರು.