ಬೆಂಗಳೂರು: ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾವೇರಿ 4ನೇ ಹಂತ 2ನೇ ಘಟ್ಟದ ವ್ಯಾಪ್ತಿಗೆ ಒಳಪಡುವ ಮಾರತ್ತಹಳ್ಳಿ ಜೀವಿಕಾ ಆಸ್ಪತ್ರೆ ಸಮೀಪ ತುರ್ತು ನಿರ್ವಹಣಾ ಕಾಮಗಾರಿ ಆರಂಭಿಸಿರುವುದರಿಂದ ಫೆಬ್ರವರಿ 20 ರಂದು ಹಲವು ಪ್ರದೇಶಗಳಲ್ಲಿ ನೀರಿನ ಪೂರೈಕೆ ಬಂದ್ ಆಗಲಿದೆ.
800 ಮಿ.ಮೀ. ವ್ಯಾಸದ ಹೂಡಿ ಜಿ.ಎಲ್.ಆರ್. ಹರಿವು ಮಾರ್ಗದಲ್ಲಿ ಕಾಮಗಾರಿ ನಡೆಯುತ್ತಿದ್ದು ಈ ಹಿನ್ನಲೆಯಲ್ಲಿ ಗುರುವಾರ ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಸತತ 12 ಗಂಟೆಗಳ ಕಾಲ ವಿವಿಧ ಪ್ರದೇಶಗಳಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಮಾರತ್ತಹಳ್ಳಿ ದೊಡ್ಡಕುಂದಿ, ಮುನ್ನಕೊಳಲು, ಓ.ಎಂ.ಬಿ.ಆರ್. ಲೇಔಟ್, ಹೆಚ್.ಆರ್.ಬಿ.ಆರ್ ಲೇಔಟ್, ಸಿಗೇಹಳ್ಳಿ, ಬಟ್ಟರಹಳ್ಳಿ ಮೇಡೆಹಳ್ಳಿ ಟಿ.ಸಿ.ಪಾಳ್ಯ ವಿಜಿನಪುರ ಬೆಳಂದೂರು. ಯಮಲೂರು, ಮುರುಗೇಶ್ ಪಾಳ್ಯ, ಕೋಣನಅಗ್ರಹಾರ, ಸಿ.ವಿ.ರಾಮನ್ ನಗರ, ಇಂದ್ರನಗರ, ತಿಪ್ಪಸಂದ್ರ ಜೀವನ್ ಭೀಮಾನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆ ನಿಲ್ಲಲಿದೆ. ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸಿ, ಅಗತ್ಯವಿರುವ ನೀರನ್ನು ಶೇಖರಿಸಿಟ್ಟುಕೊಳ್ಳುವಂತೆ ಜಲಮಂಡಳಿ ಕೋರಿದೆ.