News

ನ್ಯಾಯಾಧೀಶರಿಗೆ ವಕೀಲನಿಂದ ಬೆದರಿಕೆ: ಘಟನೆ ಖಂಡಿಸಿದ ಎಪಿಆರ್

Share It

ಬೆಂಗಳೂರು: ತಾನು ಬೆಂಗಳೂರು ವಕೀಲರ ಸಂಘದ ಪ್ರತಿನಿಧಿ ಎಂದು ಹೇಳಿಕೊಂಡು ನ್ಯಾಯಾಧೀಶರಬ್ಬರಿಗೆ ಬೆದರಿಕೆ ಹಾಕಿರುವ ಕುರಿತಂತೆ ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಘಟನೆ ಕುರಿದಂತೆ ತನ್ನ ಆದೇಶದಲ್ಲಿ ದಾಖಲು ಮಾಡಿದೆ.

ಬೆಂಗಳೂರು ವಕೀಲರ ಸಂಘದ ಚುನಾಯಿತ ಪ್ರತಿನಿಧಿಯಾಗಿರುವ ಹಾಗೂ ವಿವೇಕ್ ಸುಬ್ಬಾರೆಡ್ಡಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಕುಮಾರ ಆರ್ ಎಸ್ ಗೌಡ ಅವರು ಈ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ನ್ಯಾಯಾಲಯಕ್ಕೆ ಬೆದರಿಕೆ ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಕೂಡ ತನ್ನ ಅಸಮಾಧಾನ ಮತ್ತು ಎಚ್ಚರಿಕೆಯನ್ನು ಆದೇಶದಲ್ಲಿ ದಾಖಲು ಮಾಡಿಟ್ಟಿದೆ.

ಈ ಘಟನೆಗೆ ಸಂಬಂಧಿಸಿದಂತೆ ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎಪಿ ರಂಗನಾಥ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನ್ಯಾಯಾಲಯಕ್ಕೆ ಬೆದರಿಕೆ ಹಾಕುವಂತಹ ಘಟನೆಗಳು ವಕೀಲ ಸಮುದಾಯದ ಘನತೆಯನ್ನು ಕುಗ್ಗಿಸುತ್ತವೆ ಮತ್ತು ವಕೀಲರು ತಲೆತಗ್ಗಿಸುವಂತೆ ಮಾಡುತ್ತವೆ ಎಂದು ಎಪಿಆರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ ವಕೀಲರು ನ್ಯಾಯಾಂಗದ ಘನತೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕೆಂದು ಕಿವಿ ಮಾತು ಹೇಳಿದ್ದಾರೆ.

ಎಪಿಆರ್ ಹೇಳಿಕೆ:

“ವಕೀಲ ಸಮುದಾಯ ತಲೆತಗ್ಗಿಸುವಂತೆ ಮಾಡಿದ ಘಟನೆ”

ಬೆಂಗಳೂರು ವಕೀಲರ ಸಂಘದ ಕಾರ್ಯಕಾರಿ ಸಮಿತಿಗೆ ಎರಡನೇ ಅವಧಿಗೆ ಆಯ್ಕೆಯಾಗಿರುವ ಸನ್ಮಾನ್ಯ ಶ್ರೀ ಕುಮಾರ್ ಆರ್ ಎಸ್ ಗೌಡ ಅವರ ಕೋರ್ಟ್ ಹಾಲಿನ ನಡವಳಿಕೆಯನ್ನು ಘನತೆವೆತ್ತ ಸಿಟಿ ಸಿವಿಲ್ ಮತ್ತು ಸೆಷೆನ್ಸ್ ನ್ಯಾಯಾಲಯದ ನ್ಯಾಯಾಧೀಶರು CRL.A No.1874/2019 ದಾವೆಗೆ ಸಂಬಂಧಿಸಿದಂತೆ,ತಮ್ಮ ದೈನಂದಿನ ಆದೇಶದ ಹಾಳೆಯಲ್ಲಿ order sheets ನಲ್ಲಿ ಇಂದು ಹಾಡಿ ಹೊಗಳಿದ್ದಾರೆ. Reportable judgement ಮತ್ತು PIL ದಾವೆಗಳಲ್ಲಿ ವಾದಿಸಿ ತಮ್ಮ ಹೆಸರನ್ನು ಚಿರಸ್ಥಾಯಿ ಮಾಡಿಕೊಳ್ಳುವ ಹಂಬಲ ಹಲವಾರು ವಕೀಲರಲ್ಲಿದ್ದರೆ, ನಮ್ಮ ಅಧ್ಯಕ್ಷರಾದ ವಿವೇಕ್ ಸುಬ್ಬಾರೆಡ್ಡಿಯವರ ಬಲಗೈ ಭಂಟ ಶ್ರೀ ಕುಮಾರ್ ಆರ್ ಎಸ್ ಗೌಡರು, ಎದುರುದಾರ ವಕೀಲರಿಗೆ ಅಡಚಣೆಯುಂಟು ಮಾಡಿ, ನ್ಯಾಯಾಲಯಕ್ಕೆ ಬೆದರಿಕೆಯೊಡ್ಡಿ,ಸಂಘದ ಪ್ರತಿನಿಧಿ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಸದರಿ ಪ್ರಕರಣದಲ್ಲಿ ತಮ್ಮ ವಕೀಲಿಕೆಯನ್ನು ಹಿಂಪಡೆದಿದ್ದರೂ ಸಹ ವಿಚಾರಣೆ ಸಂದರ್ಭದಲ್ಲಿ ಹಾಜರಿದ್ದು ಅನವಶ್ಯಕವಾಗಿ ಮೂಗು ತೂರಿಸುವ ಮೂಲಕ ನ್ಯಾಯಾಧೀಶರು order sheet ನಲ್ಲಿ ದಾಖಲಾಗಿದ್ದಾರೆ.

ವಕೀಲರ ಕಷ್ಟ ಕಾರ್ಪಣ್ಯಗಳನ್ನು ನಿವಾರಿಸಲು, ಅನುಕೂಲತೆಗಳನ್ನು ಒದಗಿಸಲು, ನ್ಯಾಯಾಲಯದ ಒಳಗೆ ಮತ್ತು ಹೊರಗಿನ ವ್ಯವಹಾರಗಳನ್ನು ಪಾರದರ್ಶಕವಾಗಿ ಪ್ರಾಮಾಣಿಕವಾಗಿ ಮಾಡಬೇಕಾದ ಸಂಘದ ಪ್ರತಿನಿಧಿ ಎದುರುದಾರ ವಕೀಲರಿಗೆ ತೊಂದರೆ ಕೊಡುವ ದುರುದ್ದೇಶದಿಂದ, ನ್ಯಾಯಾಲಯಕ್ಕೆ ತಾನು ಬೆಂಗಳೂರು ವಕೀಲರ ಸಂಘದ ಪ್ರತಿನಿಧಿಯಾದ್ದರಿಂದ ತನ್ನ ಮಾತನ್ನು ಕೇಳಲೇಬೇಕೆಂದು ಬೆದರಿಕೆಯೊಡ್ಡಿದ್ದು ನಿಜಕ್ಕೂ ಅಕ್ಷಮ್ಯ.

“ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ”ಎಂಬ ಕನ್ನಡದ ಗಾದೆ ಮಾತಿಗೆ ನಿದರ್ಶನದಂತೆ, ಈ ಹಿಂದಿನ ಅವಧಿಯಲ್ಲಿ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ವಿವೇಕ್ ಸುಬ್ಬಾರೆಡ್ಡಿ ಅವರೂ ಸಿಟಿ ಸಿವಿಲ್ ಕೋರ್ಟಿನ ವಿಶೇಷ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಮುಂದೆ ತಮ್ಮ ಸ್ನೇಹಿತ ವಕೀಲರೊಂದಿಗೆ ಹೋಗಿ ಹಿರಿಯ ವಕೀಲರು ವಾದ ಮಂಡಿಸದಂತೆ ತಕರಾರು ತೆಗೆದದ್ದು,ಏರಿದ ಧ್ವನಿಯಲ್ಲಿ ನ್ಯಾಯಾಧೀಶರನ್ನು ಬೆದರಿಸಿದ್ದು ಇಲ್ಲಿ ನೆನಪಿಗೆ ಬರುತ್ತಿದೆ.

ವಕೀಲರೆಂದರೆ, ನ್ಯಾಯವಾದಿಗಳೆಂಬ ಗೌರವದಿಂದ ಸಮಾಜ ನಮ್ಮ ವಕೀಲ ಸಮುದಾಯವನ್ನು ಕಾಣುತ್ತಿದೆ ಎಂಬುದನ್ನು ನಾವು ಮರೆಯಬಾರದು. ವಕೀಲರ ಕಲ್ಯಾಣದಷ್ಟೇ, ವಕೀಲರು ಮತ್ತು ನ್ಯಾಯಾಂಗದ ಘನತೆಯನ್ನು ಕಾಪಾಡಬೇಕಾದುದು ನಮ್ಮ ವೃತ್ತಿ ಧರ್ಮ.

ಎ ಪಿ ರಂಗನಾಥ
ಮಾಜಿ ಅಧ್ಯಕ್ಷರು,
ಬೆಂಗಳೂರು ವಕೀಲರ ಸಂಘ,
ಬೆಂಗಳೂರು.


Share It

You cannot copy content of this page