News

ಮಾನವಸಂಪನ್ಮೂಲದ ಕೊರತೆಯಿಂದ ನ್ಯಾಯಾಂಗ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದೆ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ ಕುಮಾರ್

Share It

ಬೆಂಗಳೂರು: ಮಾನವಸಂಪನ್ಮೂಲದ ಕೊರತೆಯಿಂದ ನ್ಯಾಯಾಂಗ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದರಿಂದ ನ್ಯಾಯಮೂರ್ತಿಗಳಿಗೆ, ಸಿಬ್ಬಂದಿಗಳಿಗೆ, ನೌಕರರಿಗೆ ಗುಣಮಟ್ಟದ ಕೆಲಸ ಮಾಡಲು ಕಷ್ಟವಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ ಕುಮಾರ್ ಅಭಿಪ್ರಾಯಪಟ್ಟರು.

ಜ್ಞಾನಜ್ಯೋತಿ ಸಭಾಂಗಣದಲ್ಲಿ ಭಾನುವಾರ ನಡೆದ ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖಾ ನೌಕರರ ಸಂಘದ ಸುವರ್ಣ ಸಂಭ್ರಮ ಮತ್ತು ರಾಜ್ಯಮಟ್ಟದ ಮಹಾಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ನನ್ನ ವೃತ್ತಿ ಬದುಕನ್ನು ಬೆಂಗಳೂರಿನ ಸಿಟಿ ಸಿವೀಲ್ ಕೋರ್ಟ್ ನ್ಯಾಯಮೂರ್ತಿಯಾಗಿ ಆರಂಭಿಸಿ, ಈಗ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿದ್ದೇನೆ. ಇದರಿಂದ ನ್ಯಾಯಾಂಗ ಇಲಾಖೆಯ ಸಿಬ್ಬಂದಿಗಳ ಕೆಲಸದ ಕಾರ್ಯವೈಖರಿಯ ಬಗ್ಗೆ ಅರಿವಿದೆ ಎಂದು ಹೇಳಿದರು.

ಕಳೆದ ಮೂರು ವರ್ಷದಲ್ಲಿ ದಂಡ ಹಾಗೂ ಇತರ ವಿಭಾಗಗಳಿಂದ ನ್ಯಾಯಾಂಗ ಸುಮಾರು 144 ಕೋಟಿಗೂ ಹೆಚ್ಚಿನ ಆದಾಯವನ್ನು ಸರ್ಕಾರಕ್ಕೆ ನೀಡಿದೆ. ಆದರೆ ಸರ್ಕಾರ ಕೋರ್ಟ್ ಗಳ ಮೂಲಭೂತ ಸೌಕರ್ಯಕ್ಕೆ ವಿನಿಯೋಗಿಸುತ್ತಿರುವುದು ಮಾತ್ರ ಕಡಿಮೆಯಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ವಿನಂತಿಸಿದರು.

ಹೈ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯ ಮಾತನಾಡಿ, ಇಲಾಖೆಯ ಸಿಬ್ಬಂದಿಗಳ ಸಮಸ್ಯೆಗಳು ಅರಿವಿಗಿದೆ. ನಮ್ಮ ವ್ಯಾಪ್ತಿಯಲ್ಲಿ ಎಷ್ಟು ಬಗೆಹರಿಸಲು ಸಾಧ್ಯವಿದೆಯೋ ಅಷ್ಟನ್ನು ಬಗೆಹರಿಸುತ್ತಿದ್ದೇವೆ ಎಂದು ಹೇಳಿದರು.

ನ್ಯಾಯಮೂರ್ತಿ ಕೆ.ಎಸ್.ಮುದಗಲ್ ಮಾತನಾಡಿ, ವಾನರ ಸೇನೆ ಇಲ್ಲದೆ ಹೇಗೆ ರಾಮಾಯಣ ಇಲ್ಲವೂ ಹಾಗೆ ಇಲಾಖೆಯ ಸಿಬ್ಬಂದಿಗಳ ಶ್ರಮವಿಲ್ಲದೆ ನ್ಯಾಯಾಂಗ ಇಲಾಖೆಯ ಕೆಲಸ ನಡೆಯುವುದಿಲ್ಲ. ಆದ್ದರಿಂದ ನ್ಯಾಯಾಂಗ ಪಾಪ ಭೀತಿ,ದೇವರ ಮೇಲೆ ಪ್ರೀತಿ,ಸಂಘ ನೀತಿ ಎಂಬ ಮೂರು ತತ್ವದಡಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ರಾಜ್ಯ ಹೈಕೋರ್ಟ್ ನ್ಯಾಮೂರ್ತಿಗಳಾದ ಪಿ.ಸಂದೇಶ, ವಿ.ಕಾಮೇಶ್ವರ್ ರಾವ್, ರಿಜಿಸ್ಟ್ರಾರ್ ಜನರಲ್ ಭರತ್ ಕುಮಾರ್, ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶೆ ಪ್ರಭಾವತಿ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಮೂರು ಪುಸ್ತಕಗಳ ಬಿಡುಗಡೆ:

ಈ ಸಂದರ್ಭದಲ್ಲಿ ಬಿಡುವಿಲ್ಲದ ಕೆಲಸದ ನಡುವೆ ಇಲಾಖೆ ಸಿಬ್ಬಂದಿಗಳು ಬರೆದ ಕಥೆ,ಕವನ, ಸಾಹಿತ್ಯವನ್ನು ಕ್ರೂಢೀಕರಸಿದ ಎ.ಎಸ್. ಮಕಾನದಾರ ಸಂಪಾದಿಸಿದ ಮತ್ತು ರಚಿಸಿದ ಮೂರು ಪುಸ್ತಕಗಳನ್ನು ಬಿಡುಗಡೆಗೊಳಿಸಿಲಾಯಿತು. ಕನ್ನಡ ನಾಡು-ನುಡಿ, ಸಂಸ್ಕೃತಿಯನ್ನು ಬಿಂಬಿಸುವ 1000 ವಿಶೇಷ ಅಂಚೆ ಲಕೋಟೆ, ಮಹಾತ್ಮಗಾಂಧಿಯವರ 300 ವಿಶೇಷ ಅಂಚೆ ಲಕೋಟೆಗಳ ಜೊತೆಗೆ 500 ಸ್ವಾತಂತ್ರ ಹೋರಾಟಗಾರರ ಅಂಚೆಚೀಟಿಗಳನ್ನು ಕಾರ್ಯಕ್ರಮದಲ್ಲಿ ಪ್ರದರ್ಶನಕ್ಕಿಡಲಾಗಿತ್ತು.


Share It

You cannot copy content of this page