ಬೆಂಗಳೂರು: ಎಂಇಎಸ್ ಅನ್ನು ರಾಜ್ಯದಲ್ಲಿ ಬ್ಯಾನ್ ಮಾಡಬೇಕು, ಮಹಾದಾಯಿ ಯೋಜನೆ ಜಾರಿ, ಕನ್ನಡಿಗರ ರಕ್ಷಣೆ ಸೇರಿ ವಿವಿಧ ಬೇಡಿಕೆಗೆ ಆಗ್ರಹಿಸಿ ಕರೆ ನೀಡಲಾಗಿದ್ದ ಕರ್ನಾಟಕ ಬಂದ್ಗೆ ರಾಜ್ಯಾದ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ರಾಜ್ಯದ್ಯಂತ ಬಂದ್ ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಕರೆ ಇದ್ದರೂ, ಸಾರಿಗೆ ಬಸ್ಗಳು, ಆಟೋ-ಟ್ಯಾಕ್ಸಿ ಸೇವೆಗಳು ಎಂದಿನಂತೆ ಸಂಚರಿಸಿದವು. ಕರ್ನಾಟಕ ಬಂದ್ಗೆ ಹೋಟೆಲ್ ಸಂಘಗಳ ಬೆಂಬಲವಿರಲಿಲ್ಲ. ಉಳಿದಂತೆ ಎಂದಿನಂತೆ ಅಗತ್ಯ ವಸ್ತುಗಳು ಜನರಿಗೆ ಲಭ್ಯವಾಯಿತು. ಆದರೆ ಬಂದ್ ಕಾರಣ ನಗರದ ಬಸ್ ನಿಲ್ದಾಣದಲ್ಲಿ ಜನಸಂಖ್ಯೆ ಕೊಂಚ ವಿರಳವಾಗಿತ್ತು. ಉಳಿದಂತೆ ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ಗಳು ಕೂಡ ರಸ್ತೆಗಿಳಿದಿದ್ದವು. ಜನರು ದಿನನಿತ್ಯದಂತೆ ತಮ್ಮ ಕೆಲಸ, ಕಾರ್ಯಗಳಲ್ಲಿ ತೊಡಗಿದ್ದರು. ಇನ್ನು ಶಾಲಾ-ಕಾಲೇಜುಗಳು ರಜೆ ನೀಡಲಾಗಿರಲಿಲ್ಲ.
ಪ್ರತಿಭಟನಾಕಾರರು ವಶಕ್ಕೆ:
ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಗರದ ಟೌನ್ಹಾಲ್ನಿಂದ ಸ್ವಾತಂತ್ರ್ಯ ಉದ್ಯಾನವನದವರಗೂ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು, ಬಂದ್ಗೆ ಬೆಂಬಲ ನೀಡದ ರಾಜ್ಯ ಸರ್ಕಾರ ನಡೆ ಮತ್ತು ಪೊಲೀಸರ ವಿರುದ್ಧ ಕಿಡಿಕಾರಿದ ವಾಟಾಳ್ ನಾಗರಾಜ್ ಮತು ಕನ್ನಡ ಪರ ಸಂಘಟನೆಗಳು, ಟೌನ್ಹಾಲ್ ಎದುರು ಪ್ರತಿಭಟನೆಯನ್ನು ನಡೆಸಿದರು. ವಾಟಾಳ್ ನಾಗರಾಜ್, ರೂಪೇಶ್ ರಾಜಣ್ಣ, ಸಾ.ರಾ.ಗೋವಿಂದು ಸೇರಿದಂತೆ ಒಟ್ಟಾರೆ ನಗರದಲ್ಲಿ 3 ಸಾವಿರಕ್ಕೂ ಅಧಿಕ ಹೋರಾಟಗಾರರನ್ನು ಪೊಲೀಸರು ವಶಪಡಿಸಿಕೊಂಡರು.