Health News

ಬೆಂಗಳೂರನ್ನು ಟಿಬಿ ಮುಕ್ತವಾಗಿಸೋಣ: ಪಾಲಿಕೆ ಮುಖ್ಯ ಆರೋಗ್ಯಾಧಿಕಾರಿ ಸೈಯದ್ ಸಿರಾಜುದ್ದಿನ್

Share It

ಬೆಂಗಳೂರು: 2025ರಲ್ಲಿ ಟಿಬಿ ಮುಕ್ತ ನಗರವನ್ನಾಗಿ ಮಾಡಲು ನಾವೆಲ್ಲರೂ ಶ್ರಮವಹಿಸಿ ಕಾರ್ಯನಿರ್ವಹಿಸಬೇಕು ಎಂದು ಪಾಲಿಕೆಯ ಮುಖ್ಯ ಆರೋಗ್ಯ ಅಧಿಕಾರಿ ಸೈಯದ್ ಸಿರಾಜುದ್ದಿನ್ ಮದನಿ ಮನವಿ ಮಾಡಿದರು.

ವಿಶ್ವ ಕ್ಷಯ ರೋಗ ದಿನಾಚರಣೆಯ ಅಂಗವಾಗಿ ಪಾಲಿಕೆಯ ಆರೋಗ್ಯ ವಿಭಾಗದ ವತಿಯಿಂದ ಪಾಲಿಕೆ ಕೇಂದ್ರ ಕಛೇರಿಯ ಆವರಣದ ಡಾ. ರಾಜ್ ಕುಮಾರ್ ಗಾಜಿನ ಮನೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಕ್ಷಯ ರೋಗ ನಿರ್ಮೂಲನೆ ಆರೋಗ್ಯ ಸಿಬ್ಬಂದಿಯಿಂದ ಮಾತ್ರ ಸಾಧ್ಯವಿಲ್ಲ. ನಾಗರಿಕರು ಇದಕ್ಕೆ ಕೈ ಜೋಡಿಸಿದರೆ ಮಾತ್ರ ತ್ವರಿತಗತಿಯಲ್ಲಿ ಕ್ಷಯ ರೋಗವನ್ನು ನಿರ್ಮೂಲನೆ ಮಾಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ನಾಗರಿಕರಿಗೆ ಕ್ಷಯ ರೋಗದ ಕುರಿತು ಹೆಚ್ಚು ಜಾಗೃತಿ ಮೂಡಿಸುವ ಕೆಲಸವಾಗಬೇಕು. ಕ್ಷಯರೋಗ ಬಂದವರು ಔಷಧಗಳನ್ನು ಸರಿಯಾಗಿ ತೆಗೆದುಕೊಂಡರೆ ಮಾತ್ರ ನಿರ್ಮೂಲನೆ ಸಾಧ್ಯ. ಆದ್ದರಿಂದ ಕ್ಷಯ ರೋಗ ಬಂದವರು ಆರು ತಿಂಗಳ ಕಾಲ ಔಷಧಗಳನ್ನು ತಪ್ಪದೆ ಪಡೆದುಕೊಳ್ಳಬೇಕು. ಈ ಸಂಬಂಧ ನಾಗರಿಕರಲ್ಲಿ ಹೆಚ್ಚು ಅರಿವು ಮೂಡಿಸುವ ಕೆಲಸ ಆಗಬೇಕು ಎಂದು ಹೇಳಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕ್ಷಯ ರೋಗ ನಿರ್ಮೂಲನೆ ನಿರೀಕ್ಷೆಗೂ ಮೀರಿ ನಿಯಂತ್ರಣಕ್ಕೆ ಬಂದಿದ್ದು, ಅದರ ಮೇಲೆ ಮತ್ತಷ್ಟು ಪರಿಣಾಮಕಾರಿಯಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕ್ಷಯರೋಗ ನಗರವನ್ನಾಗಿ ಮಾಡುವುದು ಮುಂದಿನ ಗುರಿಯಾಗಿದೆ ಎಂದರು.

ಭಾರತದ ರಾಷ್ಟ್ರೀಯ ಟಿಬಿ ನಿರ್ಮೂಲನ ಕಾರ್ಯಕ್ರಮ(ಎನ್‌ಟಿಇಪಿ)ದ ಮೂಲಕ ಬಿಬಿಎಂಪಿಯ 143 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 6 ಸಮುದಾಯ ಆರೋಗ್ಯ ಕೇಂದ್ರಗಳು, 26 ಹೆರಿಗೆ ಕೇಂದ್ರಗಳು, 230 ನಮ್ಮ ಕ್ಲಿನಿಕ್‌ಗಳು ಮತ್ತು 10 ವೈದ್ಯಕೀಯ ಕಾಲೇಜುಗಳು ಮತ್ತು ಖಾಸಗಿ ವಲಯದಲ್ಲಿಯೂ ಸೌಲಭ್ಯಗಳಿವೆ. ಹೆಚ್ಚುವರಿಯಾಗಿ, ಸಾರ್ವಜನಿಕ ವಲಯವು 147 ಸೂಕ್ಷ್ಮದರ್ಶಕ ಕೇಂದ್ರಗಳು, 10 ಸಿಬಿಎನ್‌ಎಎಟಿ ಕೇಂದ್ರಗಳು ಮತ್ತು ಕ್ಷಯ ಪರೀಕ್ಷೆಗಾಗಿ 12 ಟಿಆರ್‌ಯುಇಎನ್‌ಎಎಟಿ ಕೇಂದ್ರಗಳಿವೆ. ಈ ಸೇವೆಗಳು ಖಾಸಗಿ ವಲಯದಲ್ಲಿಯೂ ಲಭ್ಯವಿದೆ. 2023 ರಿಂದ ಪ್ರಧಾನ ಮಂತ್ರಿ ಟಿಬಿ ಮುಕ್ತ ಭಾರತ ಅಭಿಯಾನ ಯೋಜನೆ ಅಡಿಯಲ್ಲಿ 2,120 ಕ್ಷಯ ರೋಗಿಗಳು ನಿಕ್ಷಯ್ ಮಿತ್ರರು(ದಾನಿಗಳು) ವಿತರಿಸಿದ 11,598 ಪೌಷ್ಠಿಕಾಂಶ ಕಿಟ್‌ಗಳನ್ನು ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕ್ಷಯರೋಗ ಪ್ರಮಾಣವು 2023 ರಲ್ಲಿ 15,543 ಪ್ರಕರಣಗಳಿಂದ 2024 ರಲ್ಲಿ 14,059 ಕ್ಕೆ ಮತ್ತು ಮರಣ ಪ್ರಮಾಣ 2023 ರಲ್ಲಿ 750 ಸಾವುಗಳಿಂದ 2024ರಲ್ಲಿ 702ಕ್ಕೆ ಕಡಿಮೆಯಾಗಿದೆ ಎಂದು ತಿಳಿಸಿದರು.

ಈ ವೇಳೆ ಟಿ.ಬಿ ಕಾರ್ಯಕ್ರಮ ಅಧಿಕಾರಿಯಾದ ಡಾ. ಸುರೇಶ್, ಆರೋಗ ಸಿಬ್ಬಂದಿಗಳು, ಎನ್.ಜಿ.ಓ. ಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಈ ಸಮಯದಲ್ಲಿ ಕ್ಷಯ ರೋಗಿಗಳಿಗೆ ಪೌಷ್ಠಿಕಾಂಶ ಕಿಟ್‌ಗಳನ್ನು ವಿತರಿಸಲಾಯಿತು. ಅದರ ಜೊತೆಗೆ ಪಾಲಿಕೆ ಸಿಬ್ಬಂದಿ/ನಾಗರಿಕರಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು.


Share It

You cannot copy content of this page