News

ಹೊಸ ಮೀಟರ್‌ಗಳನ್ನು ಅಳವಡಿಸಿಕೊಳ್ಳುವವರಿಗೆ ಮಾತ್ರ ಸ್ಮಾರ್ಟ್ ಮೀಟರ್ ವ್ಯವಸ್ಥೆ ಜಾರಿ: ಕೆಪಿಟಿಸಿಎಲ್

Share It

ಬೆಂಗಳೂರು: ಹೊಸ ಮೀಟರ್‌ಗಳನ್ನು ಅಳವಡಿಸಿಕೊಳ್ಳುವವರಿಗೆ ಮಾತ್ರ ಸ್ಮಾರ್ಟ್ ಮೀಟರ್ ವ್ಯವಸ್ಥೆಯನ್ನು ಜಾರಿ ಮಾಡಲಾಗಿದೆ, ಯಾರಿಗೂ ಬಲವಂತ ಮಾಡುವುದಿಲ್ಲ ಎಂದು ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ ಸ್ಪಷ್ಟಪಡಿಸಿದರು.

ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸ್ಮಾರ್ಟ್ ಮೀಟರ್ ಯೋಜನೆ ಕೇಂದ್ರ ಸರಕಾರದ್ದಾಗಿದ್ದು, ಅದರಲ್ಲಿನ ಕೆಲವು ಲೋಪದೋಷಗಳಿಂದ ರಾಜ್ಯ ಸರಕಾರ ಒಪ್ಪಿಕೊಂಡಿರಲಿಲ್ಲ. ಕೆಲವು ನಿಬಂಧನೆಗಳಂತೆ ಆರ್.ಡಿ.ಎಸ್.ಎಸ್ ಯೋಜನೆಯಡಿಯಲ್ಲಿ ಹೊಸ ಮೀಟರ್ ವ್ಯವಸ್ಥೆಯನ್ನು ಜಾರಿ ಮಾಡಿದ್ದೇವೆ. ಬೇರೆ ರಾಜ್ಯಗಳಲ್ಲಿ ಒಟ್ಟಿಗೆ ಹಳೆ ಮೀಟರ್‌ಗಳ ಬದಲಾಗಿ ಹೊಸ ಮೀಟರ್ ಅಳವಡಿಸಿಕೊಳ್ಳುವ ವ್ಯವಸ್ಥೆಯಿದೆ. ಈ ಪದ್ದತಿಯನ್ನು ಕರ್ನಾಟಕದಲ್ಲಿ ತಿರಸ್ಕರಿಸಲಾಗಿದ್ದು, ಹೊಸ ಮನೆ ಕಟ್ಟಿದಾಗ ಮತ್ತು ಹಳೆ ಮೀಟರ್‌ಗಳು ದುರಸ್ತಿಗೆ ಒಳಪಟ್ಟಾಗ ಮಾತ್ರ ಸ್ಮಾರ್ಟ್ ಮೀಟರ್  ಅಳವಡಿಸಿಕೊಳ್ಳಲು ಗ್ರಾಹಕರಿಗೆ ತಿಳಿಸಿದ್ದೇವೆ. ಹಳೆ ಮೀಟರ್‌ಗಳು ಹಾಗೆಯೇ ಇರುತ್ತವೆ ಎಂದರು.

ನೈಜ ಸಮಯದ ವಿದ್ಯುತ್ ಬಳಕೆ ಮಾಹಿತಿ ಜತೆಗೆ ವಿದ್ಯುತ್ ಬಿಲ್ ಪಾವತಿಗೆ ಡಿಜಿಟಲ್ ಸ್ಪರ್ಶ ನೀಡಲು ಮುಂದಾಗಿರುವ ಇಂಧನ ಇಲಾಖೆ ಸ್ಮಾರ್ಟ್ ಮೀಟರ್ ಯೋಜನೆ ಜಾರಿಗೊಳಿಸಿದೆ. ಮೀಟರ್ ಹಾಗೂ ಬಿಲ್ ಲೋಪದೋಷಗಳನ್ನು ಸರಿಪಡಿಸಲು ಸ್ಮಾರ್ಟ್ ಮೀಟರ್ ಅಳವಡಿಸಲಾಗುತ್ತಿದ್ದು, ಟಿಓಡಿ ಸೌಲಭ್ಯ, ರಿಮೋಟ್ ರೀಡಿಂಗ್, ಆಟೋ ಕನೆಕ್ಷನ್ ಮತ್ತು ಆಟೋ ಡಿಸ್ಕನೆಕ್ಷನ್ ಇದರಿಂದ ಸಾಧ್ಯವಾಗಲಿದೆ. ವಿದ್ಯುತ್ ಕಡಿತವಾದಾಗ ವಿದ್ಯುತ್ ವಿತರಣಾ ಕಂಪನಿಗೆ ಕ್ಷಿಪ್ರ ಮಾಹಿತಿ ತಲುಪಿ, ವಿದ್ಯುತ್ ಮರು ಸ್ಥಾಪನೆ ಪ್ರಕ್ರಿಯೆ ಸುಲಭ ಮತ್ತು ತ್ವರಿತಗೊಳ್ಳುವುದು ಎಂದರು.

ಬಹುತೇಕ ರಾಜ್ಯಗಳು ಆರ್‌ಡಿಎಸ್‌ಎಸ್ ಅಳವಡಿಸಿಕೊಂಡಿದ್ದು, ಅದರ ಮಾರ್ಗಸೂಚಿಯನ್ವಯ ಆ ರಾಜ್ಯಗಳು, ಸ್ಮಾರ್ಟ್ ಮೀಟರ್ ಮತ್ತು ಸಾಫ್ಟವೇರ್ ವೆಚ್ಚವೂ ಸೇರಿಸಿ ಟೆಂಡರ್ ಕರೆಯಲಾಗಿದ್ದು, ರಾಜ್ಯಗಳಲ್ಲಿ ವಿದ್ಯುತ್ ಸರಬರಾಜು ಕಂಪನಿಗಳೇ ಸ್ಮಾರ್ಟ್ ಮೀಟರ್ ಖರೀದಿಸಿ ಗ್ರಾಹಕರಿಗೆ ಅಳವಡಿಸಿದ ಬಳಿಕ, ಸ್ಮಾರ್ಟ್ ಮೀಟರ್ ವೆಚ್ಚ ಹಾಗೂ ಅದರ ತಾಂತ್ರಿಕ ನಿರ್ವಹಣವಾ ವೆಚ್ವವನ್ನು ವಿದ್ಯುತ್ ದರಕ್ಕೆ ಹೊಂದಾಣಿಕೆ ಮಾಡಿ ವಸೂಲಿ ಮಾಡುತ್ತಿವೆ ಎಂದರು.

ಕೆಇಆರ್‌ಸಿ ಮಾರ್ಗಸೂಚಿಯ ಅನ್ವಯ, ಕರ್ನಾಟಕದಲ್ಲಿ ಸ್ಮಾರ್ಟ್ ಮೀಟರ್ ದರವನ್ನು ಗ್ರಾಹಕರೇ ಭರಿಸುತ್ತಿದ್ದಾರೆ. ಜತೆಗೆ, ಪ್ರತಿ ತಿಂಗಳ ತಾಂತ್ರಿಕ ನಿರ್ವಹಣಾ ವೆಚ್ಚ 75 ರೂ. ಮೊತ್ತವನ್ನು ಬೆಸ್ಕಾಂ ಭರಿಸಿ, ನಂತರ ನಿರ್ವಹಣಾ ವೆಚ್ಚದಲ್ಲಿ ಹೊಂದಾಣಿಕೆ ಮಾಡಿಕೊಳ್ಳುತ್ತಿದೆ. ಇತರೆ ರಾಜ್ಯಗಳ ದರದಂತೆ ಲೆಕ್ಕ ಹಾಕಿದರೆ, ಕರ್ನಾಟಕದಲ್ಲಿ ಈ ಮೊತ್ತ 116.65 ರೂ ಆಗುತ್ತದೆ. ಹೀಗಾಗಿ ಇತರ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಸ್ಮಾರ್ಟ್ ಮೀಟರ್ ದರ ಹೆಚ್ಚಾಗಿದೆ ಎಂಬ ಆರೋಪ ಸತ್ಯಕ್ಕೆ ದೂರವಾದುದು ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಕೇವಲ ತಾತ್ಕಾಲಿಕ ಹಾಗೂ ಹೊಸ ಕನೆಕ್ಷನ್ ಗಳಿಗೆ ಮಾತ್ರ ಸ್ಮಾರ್ಟ್ ಮೀಟರ್ ಅಳವಡಿಸುವುದರಿಂದ ಈ ಸಂಖ್ಯೆಯೂ ಕಡಿಮೆ ಇದ್ದು, ರಾಜ್ಯದ ವಿವಿಧ ಸ್ಥಳಗಳಲ್ಲಿ ಪ್ರತ್ಯೇಕವಾಗಿ ಸ್ಮಾರ್ಟ್ ಮೀಟರ್ ಅಳವಡಿಸಬೇಕಾಗುತ್ತದೆ. ಅಲ್ಲದೇ, ಈ ಕೆಲಸಕ್ಕಾಗಿ ನುರಿತ ಕೆಲಸಗಾರರನ್ನು ಬಿಡ್ಡುದಾರರರು 5 ವರ್ಷಗಳ ಕಾಲ ಇರಿಸಬೇಕಿರುತ್ತದೆ. ಇದರಿಂದಾಗಿ ಅವರು ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಬೇಕು ಮತ್ತು ಕಡಿಮೆ ಮೀಟರ್ ಗಳನ್ನು ಬದಲಾಯಿಸಲು ಅನೇಕ ಬಾರಿ ಓಡಾಡಬೇಕಾಗುತ್ತದೆ. ಹೀಗಾಗಿ ಸ್ಮಾರ್ಟ್ ಮೀಟರ್ ದರ ಸಮಂಜಸವಾಗಿದೆ ಎಂದು ವಿವರಿಸಿದರು.

2025ರ ಫೆಬ್ರವರಿ 15ರಿಂದ ನಗರ ಪ್ರದೇಶಗಳಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆ ಪ್ರಕ್ರಿಯೆ ಆರಂಭವಾಗಿದ್ದು, ಮುಂಬರುವ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆ ಪ್ರಕ್ರಿಯೆ ಆರಂಭವಾಗಲಿದೆ. ಬೆಸ್ಕಾಂ ನಲ್ಲಿ ಸದ್ಯ 30,600 ಸ್ಮಾರ್ಟ್ ಮೀಟರ್‌ಗಳ ದಾಸ್ತಾನು ಇದೆ. ಕೇಂದ್ರ ವಿದ್ಯುತ್ ಸಚಿವಾಲಯ ನಿಗದಿಪಡಿಸಿರುವ ಸಾಮಾನ್ಯ ಬಿಡ್ಡಿಂಗ್ ಪ್ರಕಾರ ಹಾಗೂ ಕೆಟಿಪಿಪಿ ಕಾಯಿದೆ ಅನುಸಾರ 2024ರ ಸೆ. 26ರಂದು ಟೆಂಡರ್ ಕರೆಯಲಾಗಿತ್ತು. ಬೆಸ್ಕಾಂ ನಿರ್ದೇಶಕರ ಮಂಡಳಿಯ ಅನುಮೋದನೆ ಮೇರೆಗೆ, ಕಡಿಮೆ ದರ ಬಿಡ್ ಮಾಡಿದ್ದ ರಾಜಶ್ರೀ ಎಲೆಕ್ಟ್ರಿಕಲ್ಸ್ ಸಂಸ್ಥೆಗೆ 2024ರ ಡಿ.23ರಂದು ಗುತ್ತಿಗೆ ನೀಡಲಾಯಿತು ಎಂದು ಮಾಹಿತಿ ನೀಡಿದರು.


Share It

You cannot copy content of this page