ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2025-26ನೇ ಸಾಲಿನ ಆಯವ್ಯಯ ಶನಿವಾರ ಮಂಡನೆಯಾಗಲಿದ್ದು, 19 ಸಾವಿರ ಕೋಟಿ ರೂ. ಗಿಂತ ಹೆಚ್ಚು ಗಾತ್ರದ ಬಜೆಟ್ ಮಂಡನೆಯಾಗಲಿದೆ.
ಅಂದು ಬೆಳಗ್ಗೆ 11 ಗಂಟೆಗೆ ನಗರದ ಟೌನ್ಹಾಲ್ ನಲ್ಲಿ ಬಿಬಿಎಂಪಿ ಆಡಳಿತಗಾರ ಎಸ್.ಆರ್. ಉಮಾಶಂಕರ್ ಮತ್ತು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರ ಅಧ್ಯಕ್ಷತೆಯಲ್ಲಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಡಾ.ಕೆ. ಹರೀಶ್ ಕುಮಾರ್ ಬಜೆಟ್ ಪ್ರಸ್ತುತ ಪಡಿಸಲಿದ್ದಾರೆ.
ಮೂಲಸೌಕರ್ಯ ಅಭಿವೃದ್ದಿಗಾಗಿಯೇ ಮಹತ್ವದ ಯೋಜನೆಗಳನ್ನು ಕೈಗೊಳ್ಳುವ ಉದ್ದೇಶದಿಂದ ಬರೋಬ್ಬರಿ 7 ಸಾವಿರ ಕೋಟಿ ರೂ. ಅನುದಾನವನ್ನು 2025-26ನೇ ಸಾಲಿನಲ್ಲಿ ಒದಗಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದರು. ಅದಕ್ಕನುಗುಣವಾಗಿ ಒಟ್ಟಾರೆ 19 ಸಾವಿರ ಕೋಟಿ ರೂ.ಗಿಂತ ಹೆಚ್ಚು ಗಾತ್ರದ ಬಜೆಟ್ ಮಂಡನೆಗೆ ತಯಾರಿ ಮಾಡಿಕೊಳ್ಳಲಾಗಿದೆ.
4 ಕಡೆಗಳಲ್ಲಿ ಸುರಂಗ ಕಾರಿಡಾರ್ ಯೋಜನೆ:
ಮುಖ್ಯವಾಗಿ 40 ಸಾವಿರ ಕೋಟಿ ರೂ. ವೆಚ್ಚದ ಪೂರ್ವ-ಪಶ್ಚಿಮ ಮತ್ತು ಉತ್ತರ-ದಕ್ಷಿಣ ಸುರಂಗ ಕಾರಿಡಾರ್ ಯೋಜನೆಗೆ ಬಿಬಿಎಂಪಿ ಬಜೆಟ್ನಲ್ಲಿ ಪ್ರಾಮುಖ್ಯತೆ ಸಿಗುವ ನಿರೀಕ್ಷೆಯಿದ್ದು, ಈ ಬೃಹತ್ ಯೋಜನೆಯ ಜತೆಗೆ ಮೂಲಸೌಕರ್ಯ, ಶಿಕ್ಷಣ, ಆರೋಗ್ಯ, ಫುಟ್ಪಾತ್, ಪರಿಸರ, ಪ್ರವಾಹ ನಿಯಂತ್ರಣ ಕಾಮಗಾರಿಗಳು ಸೇರಿದಂತೆ ಇತರ ಯೋಜನೆಗಳು ಬಜೆಟ್ನಲ್ಲಿ ಹೆಚ್ಚು ಸ್ಥಾನ ಪಡೆಯುವ ಸಾಧ್ಯತೆ ಇದೆ. ಉಳಿದಂತೆ ಕಲ್ಯಾಣ ಯೋಜನೆಗಳು, ನಿರ್ವಹಣೆ ಕಾಮಗಾರಿ ಸೇರಿದಂತೆ ಇತರೆ ಪ್ರಮುಖ ಅನುದಾನ ಮೀಸಲಿಡಲಾಗಲಿದೆ.