ಬೆಂಗಳೂರು: ಈ ಬಾರಿಯ ಪಾಲಿಕೆಯ ಬಜೆಟ್ ನಲ್ಲಿ ಕಸ ನಿರ್ವಹಣೆಗೆ ಒತ್ತು ನೀಡಿರುವುದು ಮುಖ್ಯ ವಿಚಾರವಾಗಿ ಹೊರಹೊಮ್ಮಿದೆ.
ಸ್ವಚ್ಛ ಬೆಂಗಳೂರು ಕಾರ್ಯಯೋಜನೆ ಅಡಿಯಲ್ಲಿ ಸಮರ್ಪಕ ತ್ಯಾಜ್ಯ ನಿರ್ವಹಣೆಯ ಬಗ್ಗೆ ಸಾರ್ವಜನಿಕರು ಮತ್ತು ತಜ್ಞರು ನೀಡಿದ ಅಭಿಪ್ರಾಯಗಳನ್ನು ಪರಿಗಣಿಸಿ, ಮುಂದಿನ 30 ವರ್ಷಗಳವರೆಗೆ ಸಮಗ್ರ ತ್ಯಾಜ್ಯ ನಿರ್ವಹಣೆಗಾಗಿ ನಗರದ 4 ದಿಕ್ಕುಗಳಲ್ಲಿ ಸುಮಾರು 100 ಎಕರೆ ಪ್ರದೇಶದ ತ್ಯಾಜ್ಯ ವಿಲೇವಾರಿ ಮಾಡಲು ಯೋಜಿನೆ ರೂಪಿಸಿದೆ. 4 ಪ್ಯಾಕೇಜ್ಗಳಲ್ಲಿ ಸಮಗ್ರ ತ್ಯಾಜ್ಯ ನಿರ್ವಹಣೆ ಯೋಜನೆ ಕಾರ್ಯರೂಪಕ್ಕೆ ಬರಲಿದೆ.
ಪಾಲಿಕೆ ವ್ಯಾಪ್ತಿಯ ವಾರ್ಡ್ ಗಳಲ್ಲಿ ಪ್ರಾಥಮಿಕ ಘನತ್ಯಾಜ್ಯ ಸಂಗ್ರಹಣೆ ಮತ್ತು ದ್ವಿತೀಯ ಹಂತದ ತ್ಯಾಜ್ಯ ವಿಲೇವಾರಿಗಾಗಿ ನೂತನ ವ್ಯವಸ್ಥೆ ಈ ಸಾಲಿನಲ್ಲಿ ಅನುಷ್ಠಾನಕ್ಕೆ ಬರಲಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಶೇಖರಣೆಗೊಂಡ 97.82 ಲಕ್ಷ ಟನ್ ಪಾರಂಪರಿಕ ತ್ಯಾಜ್ಯ ನಿರ್ವಹಣೆಗೆ ವಿಶೇಷವಾದ ಪ್ರಾಮುಖ್ಯತೆಯನ್ನು ನೀಡಿ, ಮಂಡೂರು ಹಂತ-1 ಘಟಕದಲ್ಲಿ ಬಯೋಮೈನಿಂಗ್ ಹಾಗೂ ಬೆಲ್ಲಹಳ್ಳಿ ಘಟಕದಲ್ಲಿ ಬಯೋ-ರೆಮಿಡಿಯೇಷನ್ ಮೂಲಕ ಒಟ್ಟು 47.60 ಲಕ್ಷ ಟನ್ ಪಾರಂಪರಿಕ ತ್ಯಾಜ್ಯ ನಿರ್ವಹಣೆ ಮಾಡಲಾಗುತ್ತಿದೆ.
ಪ್ರಸ್ತುತ ಸಾಲಿನಲ್ಲಿ ಮಂಡೂರು ಹಂತ-2, ಮಾವಳ್ಳಿಪುರ, ದೊಡ್ಡಬಿದರಕಲ್ಲು, ಲಕ್ಷ್ಮೀ ರಾಮಾಪುರ, ಬಿಂಗೀಪುರ ಮತ್ತು ಸುಬ್ಬರಾಯನಪಾಳ್ಯದಲ್ಲಿ ಅಂದಾಜು 39.07 ಲಕ್ಷ ಟನ್ ಪಾರಂಪರಿಕ ತ್ಯಾಜ್ಯ ನಿರ್ವಹಣೆಯನ್ನು ಸ್ವಚ್ಛ ಭಾರತ ನಗರ 2.0 ಅನುದಾನದಡಿಯಲ್ಲಿ ಕೇಂದ್ರ, ರಾಜ್ಯ ಹಾಗೂ ಪಾಲಿಕೆಯ ಸಂಪನ್ಮೂಲದಿಂದ ಒಟ್ಟು ಅಂದಾಜು 187 ಕೋಟಿ ಮೊತ್ತದಲ್ಲಿ ನಿರ್ವಹಿಸಲಾಗುತ್ತಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಅಂದಾಜು 4500 ಮೆ.ಟನ್ ಕಟ್ಟಡ ಮತ್ತು ಭಗ್ನಾವಶೇಷ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಪ್ರಸ್ತುತ ಪಾಲಿಕೆಯಲ್ಲಿ 1750 ಮೆ.ಟನ್ ತ್ಯಾಜ್ಯವನ್ನು ಸಂಸ್ಕರಿಸುವ 2 ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಈ ತ್ಯಾಜ್ಯವನ್ನು ವಾರ್ಡ್ ಗಳಿಂದ ಸಂಗ್ರಹಿಸಿ, ಹಾಲಿ ನಿರ್ವಹಿಸುತ್ತಿರುವ ಘಟಕಕ್ಕೆ ವಿಲೇವಾರಿ ಮಾಡಲು ಕಟ್ಟಡ ಮತ್ತು ಭಗ್ನಾವಶೇಷ ತ್ಯಾಜ್ಯ ಸಂಗ್ರಹಣೆ ಮತ್ತು ಸಾಗಾಣಿಕೆ ಕಾರ್ಯವನ್ನು 3 ಪ್ಯಾಕೇಜ್ಗಳಲ್ಲಿ ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದಡಿಯಲ್ಲಿ ಅನುಷ್ಠಾನಗೊಳಿಗೊಳ್ಳಲಿದೆ. ಉಳಿದ 3000 ಮೆ.ಟನ್ ಕಟ್ಟಡ ಮತ್ತು ಭಗ್ನಾವಶೇಷ ತ್ಯಾಜ್ಯದ ಸಂಗ್ರಹಣೆ, ಸಾಗಾಣಿಕೆ ಮತ್ತು ಸಂಸ್ಕರಣೆಗಾಗಿ ಪ್ರತಿನಿತ್ಯ 750 ಮೆ.ಟನ್ ಸಾಮರ್ಥ್ಯದಂತೆ 4 ಪ್ಯಾಕೇಜ್ಗಳನ್ನು ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದಡಿಯಲ್ಲಿ ಈ ಆರ್ಥಿಕ ವರ್ಷದಲ್ಲಿ ಕಾರ್ಯರೂಪಕ್ಕೆ ತರಲಾಗಲಿದೆ. ಪಾಲಿಕೆ ವ್ಯಾಪ್ತಿಯಲ್ಲಿ ತ್ಯಾಜ್ಯ ವರ್ಗಾವಣೆ ಸಮಯದಲ್ಲಿ ನಿರ್ಮಾಣವಾಗುವ ಬ್ಲಾಕ್ ಸ್ಪಾಟ್ಗಳನ್ನು ತಡೆಗಟ್ಟಲು ವೈಜ್ಞಾನಿಕವಾಗಿ ತ್ಯಾಜ್ಯ ನಿರ್ವಹಿಸುವ ವರ್ಗಾವಣಾ ಕೇಂದ್ರ (ಟ್ರಾನ್ಸ್ಫರ್ಸ್ಟೇಷನ್) ಗಳನ್ನು ನಿರ್ಮಿಸಲಾಗುತ್ತಿದೆ.
ಸದ್ಯ ಚಾಮರಾಜಪೇಟೆ ವಿಭಾಗದ ವಾರ್ಡ್ ಸಂ.138 ರಲ್ಲಿ ಎರಡು ಘಟಕಗಳು ಕಾರ್ಯಾರಂಭಗೊಂಡಿದ್ದು, ಸರ್ವಜ್ಞನಗರ ವಿಭಾಗದಲ್ಲಿ ಒಂದು ಘಟಕದ ನಿರ್ಮಾಣ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. 15ನೇ ಹಣಕಾಸು ಆಯೋಗದ ಅನುದಾನ ಹಾಗೂ ಸ್ವಚ್ಛ ಭಾರತ ನಗರ 2.0 ಅನುದಾನದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದು ಘಟಕದಂತೆ ಒಟ್ಟು 27 ಟ್ರಾನ್ಸ್ಫರ್ಸ್ಟೇಷನ್ ಕಾರ್ಯರೂಪಕ್ಕೆ ಬರಲಿದೆ. ಪ್ರತಿನಿತ್ಯ 50 ಟನ್ ಸಾಮರ್ಥ್ಯದ ಬಯೋ ಸಿಎನ್ಜಿ. ಘಟಕ, 5 ಮೆ.ಟನ್ ಸಾಮರ್ಥ್ಯದ 4 ಬಯೋಮಿಥನೈಸೇಶನ್ ಘಟಕ, ಪ್ರತಿನಿತ್ಯ 8 ಟನ್ ಸಾಮರ್ಥ್ಯದ ಪ್ರಾಣಿ ತ್ಯಾಜ್ಯ ಸಂಸ್ಕರಣಾ ಘಟಕ, 25 ಟನ್ ಗೃಹ ಹಾನಿಕಾರಕ ನೈರ್ಮಲ್ಯ ತ್ಯಾಜ್ಯದಂತಹ ವಿಕೇಂದ್ರಿಕೃತ ಘಟಕಗಳನ್ನು ಈ ವರ್ಷ ಕಾರ್ಯಾರಂಭಗೊಳ್ಳಲಿದೆ. ಇದಲ್ಲದೆ ದಿನಂಪ್ರತಿ 300 ಟನ್ ಸಾಮರ್ಥ್ಯದ ಬಯೋ ಸಿ.ಎನ್.ಜಿ. ಘಟಕವನ್ನು ಗೇಲ್ ಸಂಸ್ಥೆಯ ಸಹಯೋಗದೊಂದಿಗೆ ಪ್ರಾರಂಭಿಸುವ ಗುರಿಯನ್ನು ಹೊಂದಲಾಗಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಒಣತ್ಯಾಜ್ಯ ನಿರ್ವಹಣೆಯಲ್ಲಿ ಹೆಚ್ಚಿನ ಸಾಮರ್ಥ್ಯದ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವ ಅಗತ್ಯಕ್ಕನುಗುಣವಾಗಿ. ಪ್ರತಿನಿತ್ಯ 1226 ಮೆ. ಟನ್ ಸಾಮರ್ಥ್ಯದ ಒಣತ್ಯಾಜ್ಯ ಸಂಸ್ಕರಿಸುವ ಎಂಆರ್ಎಫ್ ಯನ್ನು ಸ್ವಚ್ಛ ಭಾರತ ನಗರ 2.0 ಅನುದಾನದ ಅಡಿಯಲ್ಲಿ 104 ಕೋಟಿಗಳ ವೆಚ್ಚದಲ್ಲಿ ನಿರ್ಮಾಣವಾಗಲಿದೆ.ಅದೇ ರೀತಿ, 6 ಕೋಟಿ ವೆಚ್ಚದಲ್ಲಿ ಕೆ.ಸಿ.ಡಿ.ಸಿ. ಆವರಣದಲ್ಲಿ ನಿರ್ಮಿಸಲಾಗುತ್ತಿರುವ ಘಟಕ ಮತ್ತು ತರಬೇತಿ ಕೇಂದ್ರ ಈ ವರ್ಷ ಪ್ರಾರಂಭವಾಗಲಿದೆ.
ಪಾಲಿಕೆಯ ಘನತ್ಯಾಜ್ಯ ನಿರ್ವಹಣೆ ವ್ಯಾಪ್ತಿಯ ಬೆಲ್ಲಹಳ್ಳಿ, ಮಿಟ್ಟಗಾನಹಳಿ, ಬಾಗಲೂರು, ಬೈಯಪ್ಪನಹಳ್ಳಿ ಹಾಗೂ ಕಣ್ಣೂರು ಭೂಭರ್ತಿ ಪ್ರದೇಶಗಳಲ್ಲಿ ಸಂಗ್ರಹಣೆಯಾಗಿರುವ ಪಾರಂಪರಿಕ ಲಿಚೆಟ್ ತ್ಯಾಜ್ಯ ಸಂಸ್ಕರಣೆಗಾಗಿ 474.89 ಕೋಟಿ ಅನುದಾನದ ಮೀಸಲಿಡಲಾಗಿದೆ. ಕಸಕ್ಕಾಗಿದೆ ಪ್ರತ್ಯೇಕ ಕಮಾಂಡ್ ಕಂಟ್ರೋಲ್ ರೂಂ ಸ್ಥಾಪಿನೆಯಾಗಲಿದೆ. ಇನ್ನು 1500 ಕಿ.ಮೀ. ಉದ್ದದ ಆರ್ಟೀರಿಯಲ್ ಮತ್ತು ಸಬ್-ಆರ್ಟೀರಿಯಲ್ ರಸ್ತೆಗಳ ಸ್ವಚ್ಛತೆಗಾಗಿ ಸುಧಾರಿತ ಮೆಕ್ಯಾನಿಕಲ್ ಸ್ವೀಪಿಂಗ್ ಯಂತ್ರಗಳನ್ನು ಬಳಕೆ ಮಾಡಲು 2024-25 ನೇ ಸಾಲಿನಲ್ಲಿ 30 ಕೋಟಿಗಳನ್ನು ಮೀಸಲಿರಿಸಲಾಗಿದೆ. 2025-26ನೇ ಸಾಲಿನಲ್ಲಿ ಈ ಬಾಬ್ತಿನಡಿ 40 ಕೋಟಿಗಳನ್ನು ನಿಗಧಿಪಡಿಸಲಾಗಿದೆ.