Education News

150 ನೇ ವಸಂತಕ್ಕೆ ಕಾಲಿರಿಸಿದ ಬೆಂಗಳೂರು ನಗರ ವಿಶ್ವವಿದ್ಯಾಲಯದ ಸೆಂಟ್ರಲ್ ಕಾಲೇಜು

Share It

ಬೆಂಗಳೂರು: ನಗರದ ಹೃದಯ ಭಾಗದಲ್ಲಿರುವ ಸ್ವಾತಂತ್ರ್ಯ ಪೂರ್ವದ ವಾಸ್ತುಶಿಲ್ಪ ಶೈಲಿ ಮತ್ತು ಬಣ್ಣಗಳನ್ನು ಹೊಂದಿರುವ ಸೆಂಟ್ರಲ್ ಕಾಲೇಜಿನ ಆವರಣ ಬೆಂಗಳೂರು ನಗರ ವಿಶ್ವವಿದ್ಯಾಲಯವನ್ನು ಭಾಗವಾಗಿದ್ದು, ಈಗ ಅದು 150 ನೇ ವಸಂತಕ್ಕೆ ಕಾಲಿರಿಸಿದೆ.

ಹಳೆಯ ಮರಗಳ ನಡುವೆ ನೆಲೆಗೊಂಡಿರುವ 1875 ರಲ್ಲಿ ಸ್ಥಾಪಿತವಾದ ಸೆಂಟ್ರಲ್ ಕಾಲೇಜು ಬೆಂಗಳೂರಿನ ಅತ್ಯಂತ ಹಳೆಯ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದ್ದು, ಈಗ ಬೆಂಗಳೂರು ನಗರ ವಿಶ್ವವಿದ್ಯಾಲಯವಾಗಿದೆ. ಇನ್ನು ಕ್ಯಾಂಪಸ್‌ನ ಸೆಂಟ್ರಲ್ ಬ್ಲಾಕ್‌ನಲ್ಲಿರುವ ಗಡಿಯಾರ ಗೋಪುರವನ್ನು 1860 ರಲ್ಲಿ ಬ್ರಿಟಿಷ್ ಲೇಖಕ ಮತ್ತು ಶಿಕ್ಷಣ ತಜ್ಞ ಬಿ.ಎಲ್. ರೈಸ್ ನಿರ್ಮಿಸಿರುವುದು ಗತಕಾಲದ ವೈಭವವನ್ನು ಪ್ರತಿನಿಧಿಸುತ್ತಿದೆ. ಮೈಸೂರು ವಿಶ್ವವಿದ್ಯಾಲಯದ ‘ವಿಜ್ಞಾನ ಕ್ಯಾಂಪಸ್’ ಎಂದೂ ಸೆಂಟ್ರಲ್ ಕಾಲೇಜು ಖ್ಯಾತಿ ಪಡೆದಿದ್ದು ಕೂಡ ಉಲ್ಲೇಖನೀಯವಾಗಿದೆ.

ಜ್ಞಾನ ಜ್ಯೋತಿ ಕ್ಯಾಂಪಸ್ 43 ಎಕರೆ ಪ್ರದೇಶದಲ್ಲಿ ವ್ಯಾಪಿಸಿದ್ದು, 19 ನೇ ಶತಮಾನದ ಗೋಥಿಕ್ ವಾಸ್ತುಶಿಲ್ಪವನ್ನು ಇಲ್ಲಿನ ಕಟ್ಟಡಗಳು ಹೊಂದಿವೆ. ಕ್ಯಾಂಪಸ್ ಅನ್ನು ಕಳೆದ ಮೂರು ವರ್ಷಗಳ ಸಮಯದಲ್ಲಿ 155 ಕೋಟಿ ಹಣವನ್ನು ವ್ಯಯಿಸಿ ಪುನಃಸ್ಥಾಪನೆ ಮತ್ತು ನವೀಕರಣ ಮಾಡಲಾಗಿದೆ. ಮುಖ್ಯವಾಗಿ ಆಡಳಿತ ವಿಭಾಗ, ಅರ್ಥಶಾಸ್ತ್ರ ವಿಭಾಗ, ಭೌತಶಾಸ್ತ್ರ ವಿಭಾಗ, ಗ್ರಂಥಾಲಯ ಮತ್ತು ಸೆನೆಟ್ ಹಾಲ್‌ಗಳು ಪುನಃಸ್ಥಾಪನೆಯಾಗಿದೆ.

2017-18ರ ಶೈಕ್ಷಣಿಕ ವರ್ಷದಲ್ಲಿ ಸೆಂಟ್ರಲ್ ಕಾಲೇಜು ಬೆಂಗಳೂರು ನಗರ ವಿಶ್ವವಿದ್ಯಾಲಯದ ಪ್ರಧಾನ ಕಛೇರಿಯಾಗಿ ಮಾರ್ಪಾಡಾಯಿತು. ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ, ಸಿ. ರಾಜಗೋಪಾಲಾಚಾರಿ, ಸಿಎನ್ಆರ್ ರಾವ್ ಮತ್ತು ನೊಬೆಲ್ ಪುರಸ್ಕೃತ ವಿಜ್ಞಾನಿ ಸಿ.ವಿ. ರಾಮನ್ ಇಲ್ಲಿ ಓದಿದ ಪ್ರಮುಖರಾಗಿದ್ದಾರೆ. 1928 ರ ಮಾರ್ಚ್ 16 ರಂದು ರಾಮನ್ ಎಫೆಕ್ಟ್ ಉಪನ್ಯಾಸವನ್ನು ಇಲ್ಲಿಯೇ ನೀಡಿದ್ದರು. ಇಂದಿಗೂ, ಅವರ ಹೆಸರಿನ ಅದೇ ಸಭಾಂಗಣವನ್ನು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಲು ಬಳಸಲಾಗುತ್ತಿದೆ. ರಾಮನ್ ಅವರು ಬಳಸುತ್ತಿದ್ದ ಮೇಜು ಮತ್ತು ಬೋರ್ಡ್ ಇನ್ನೂ ಸಭಾಂಗಣದಲ್ಲಿ ಬಲವಾಗಿ ನಿಂತಿವೆ. ಸದ್ಯ ಇಲ್ಲಿನ 23 ವಿಭಾಗಗಳಲ್ಲಿ 4,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ ಎಂದು ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಲಿಂಗರಾಜ ಗಾಂಧಿ ತಿಳಿಸಿದ್ದಾರೆ.

ಸೆಂಟ್ರಲ್ ಕಾಲೇಜು ನಾನು ಓದಿದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. ಜಿ.ಪಿ. ರಾಜರತ್ನಂ ನಮ್ಮ ಕನ್ನಡ ಪ್ರಾಧ್ಯಾಪಕರಾಗಿದ್ದರು. ಆಗ ಕಾಲೇಜಿನ ಹಾಕಿ ತಂಡದ ನಾಯಕನಾಗಿದ್ದೆ. ಶಿಕ್ಷಣದ ಗುಣಮಟ್ಟ ಮತ್ತು ಒದಗಿಸಲಾದ ಸೌಲಭ್ಯಗಳಿಗಾಗಿ ನಾನು ಕಾಲೇಜನ್ನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ ಎಂದು ಮಾಜಿ ಲೋಕಾಯುಕ್ತರಾದ ಎನ್. ಸಂತೋಷ್ ಹೆಗ್ಡೆ ಹೇಳಿದ್ದಾರೆ.


Share It

You cannot copy content of this page