ಬೆಂಗಳೂರು: ಮೂಟ್ಕೋರ್ಟ್ ಕೇವಲ ಸ್ಪರ್ಧೆ ಮಾತ್ರಲ್ಲದೇ ಕಾನೂನುಜ್ಞಾನ, ವಿಶ್ಲೇಷಣಾ ಚಿಂತನೆ, ಸಂವಹನಕೌಶಲ್ಯ ಮತ್ತು ವೃತ್ತಿಪರತೆಯ ಸಂಯೋಜನೆಯಾಗಿರುವ ಶಕ್ತಿಯುತ ಶೈಕ್ಷಣಿಕ ಕಲಿಕೆಯಾಗಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ಪ್ರಸಾದ್ ತಿಳಿಸಿದರು.
ಶನಿವಾರ ನಗರದ ಚಾಣಕ್ಯ ವಿಶ್ವವಿದ್ಯಾಲಯ ವತಿಯಿಂದ ಚಾಣಕ್ಯ ಕಲಿಕಾ ನ್ಯಾಯಾಲಯ ಮೂಟ್ಕೋರ್ಟ್ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಪ್ರಖ್ಯಾತ 24 ಕಾನೂನು ವಿದ್ಯಾಲಯಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಇದು ವಿಶ್ವವಿದ್ಯಾಲಯದ ಕಾನೂನು ಶಿಕ್ಷಣದ ಮಹತ್ವಪೂರ್ಣ ಮೈಲಿಗಳಗಿದೆ ಎಂದರು.
ನ್ಯಾಯಾಲಯದಲ್ಲಿ ವಕೀಲರವಾದಗಳಿಗಿಂತಲೂ ನ್ಯಾಯಾಧೀಶರಿಗೆ ಪ್ರಕರಣದ ಸಾರವನ್ನು ಅರ್ಥಮಾಡಿಕೊಳ್ಳುವಂತೆ ಮಾಡುವುದು ಮುಖ್ಯವಾಗಿದೆ. ತಂತ್ರಜ್ಞಾನದ ಪಾತ್ರವನ್ನು ಗಮನಿಸಿರುವ ಚಾಣಕ್ಯ ವಿಶ್ವವಿದ್ಯಾಲಯ ಆಧುನಿಕ ಬೋಧನಾ ವಿಧಾನಗಳನ್ನು ಅಳವಡಿಸಿಕೊಂಡು ಶಿಸ್ತಿನ ಶಿಕ್ಷಣ ಕ್ರಮವನ್ನು ಅನುಸರಿಸುತ್ತಿರುವುದು ಶ್ಲಾಘಿನೀಯ ಎಂದು ನುಡಿದರು.
ಚಾಣಕ್ಯ ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ಪದ್ಮಶ್ರೀ ಪುರಸ್ಕೃತ ಪ್ರೊ. ಎಂ. ಕೆ. ಶ್ರೀಧರ್ ಮಾತನಾಡಿ, ವಿಶ್ವವಿದ್ಯಾಲ ಸಕಾರಾತ್ಮಕ ಹಾಗೂ ಪ್ರಗತಿಶೀಲ ನಿಲುವನ್ನು ಪ್ರತಿಪಾದಿಸುತ್ತಿದೆ. ವಿದ್ಯಾರ್ಥಿಗಳ ಚಿಂತನಾಶಕ್ತಿಯನ್ನು ವಿಸ್ತರಿಸುತ್ತಾ ಆಲೋಚನಾ ಸಾಮರ್ಥ್ಯವನ್ನು ಬೆಳೆಸುತ್ತಿದೆ ಎಂದು ಹೇಳಿದರು.
ಮೂಟ್ಕೋರ್ಟ್ ಸ್ಪರ್ಧೆ ಕಾನೂನುಪದಗಳು ಮತ್ತು ನ್ಯಾಯಾಲಯದ ವಿಧಿ ವಿಧಾನಗಳನ್ನು ಅರ್ಥಮಾಡಿಕೊಳ್ಳಲು ಸಹಾಯಮಾಡುತ್ತದೆ. ಜೊತೆಗೆ ನ್ಯಾಯಾಲಯದ ಆಚೆಗೂ ಜ್ಞಾನವನ್ನು ವಿಸ್ತರಿಸಿಕೊಂಡು ವೃತ್ತಿಪರದೃಷ್ಟಿಕೋನವನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಚಾಣಕ್ಯ ವಿಶ್ವವಿದ್ಯಾಲಯದ ಸಮಕುಲಪತಿ ಪ್ರೊ. ಎಚ್.ಎಸ್. ಸುಬ್ರಮಣ್ಯ, ಕಾನೂನು, ಆಡಳಿತ ಮತ್ತು ಸಾರ್ವಜನಿಕ ನೀತಿನಿಕಾಯ ಡೀನ್ ಪ್ರೊ. ಚೇತನ್ಬಿ ಸಿಂಗಾಯಿ ಸೇರಿದಂತೆ ಮುಂತಾದವರಿದ್ದರು.