Law

ಜಾಮೀನು ಶ್ಯೂರಿಟಿ ದಾಖಲೆಗಳ ಪರಿಶೀಲನೆಗೆ ಹೈಕೋರ್ಟ್ ಮಾರ್ಗಸೂಚಿ

Share It

ಲೇಖನ: ಮಂಜೇಗೌಡ ಕೆ.ಜಿ, ವಕೀಲರು, 9980178111

ಕ್ರಿಮಿನಲ್ ಪ್ರಕರಣಗಳಲ್ಲಿ ಜಾಮೀನು ಪಡೆಯಲು ಭದ್ರತೆಗಾಗಿ ನಕಲಿ ದಾಖಲೆಗಳನ್ನು ಸಲ್ಲಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವುದನ್ನು ತಡೆಗಟ್ಟಲು ಹೈಕೋರ್ಟ್ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಅಲ್ಲದೇ, ಜಾಮೀನಿಗಾಗಿ ಶ್ಯೂರಿಟಿ ನೀಡುವವರ ಸಂಪೂರ್ಣ ವಿವರವನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಲು ವಿಚಾರಣಾ ನ್ಯಾಯಾಲಯಗಳಿಗೆ ನಿರ್ದೇಶಿಸಿದೆ. ಹಾಗೆಯೇ, ಈ ಸಂಬಂಧ ಅಗತ್ಯ ತಾಂತ್ರಿಕ ನೆರವು ನೀಡುವಂಂತೆ ಕಂದಾಯ ಇಲಾಖೆ ಹಾಗೂ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ)ಕ್ಕೆ ಸೂಚನೆ ನೀಡಿದೆ.

ಈಗಾಗಲೇ ಸಾವನ್ನಪ್ಪಿರುವ ವ್ಯಕ್ತಿಯ ಆಧಾರ್​ ಕಾರ್ಡ್​ ಹಾಗೂ ಜಮೀನಿನ ನಕಲಿ ದಾಖಲೆಗಳನ್ನು ನೀಡಿ ಜಾಮೀನು ಪಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸೂರಜ್​ ಗೋವಿಂದರಾಜು ಅವರಿದ್ದ ಪೀಠ ಈ ಆದೇಶ ಹೊರಡಿಸಿದೆ.

ಹೈಕೋರ್ಟ್ ಮಾರ್ಗಸೂಚಿಗಳು:
ಜಾಮೀನಿಗಾಗಿ ಬರುವ ಶ್ಯೂರಿಟಿಯ ಆಸ್ತಿ ಪತ್ರಗಳನ್ನು ಸರ್ಕಾರದ ವೆಬ್​ಸೈಟ್​ಗಳಾದ ಕಾವೇರಿ ಹಾಗೂ ಭೂಮಿಯಲ್ಲಿ ಪರಿಶೀಲಿಸಬೇಕು. ಅಗತ್ಯವಿದ್ದಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಂದ ಮತ್ತೊಮ್ಮೆ ಖಾತರಿ ಪಡಿಸಿಕೊಳ್ಳಬೇಕು.

ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಶ್ಯೂರಿಟಿಗಾಗಿ ಒದಗಿಸಿರುವ ಜಮೀನುಗಳ ಮಾಹಿತಿ ನೀಡುವುದಕ್ಕೆ ತಮ್ಮ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಬೇಕು. ಹೈಕೋರ್ಟ್​ನ ರಿಜಿಸ್ಟ್ರಾರ್​ ಜನರಲ್​​ ಅವರು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಈ ಕುರಿತು ಸಂಹವಹ ನಡೆಸಬೇಕು.

ನಗದು ಶ್ಯೂರಿಟಿ ನೀಡಿದಾಗ ಅಂತಹ ವ್ಯಕ್ತಿ ನೀಡಿರುವ ವಿಳಾಸದಲ್ಲಿಯೇ ನೆಲೆಸಿದ್ದಾರೆ ಎಂಬ ಕುರಿತು ಆಧಾರ್​ ಕಾರ್ಡ್, ಪಡಿತರ ಚೀಟಿ, ಮತದಾರರ ಗುರುತಿ ಚೀಟಿಯಂತಹ ದಾಖಲೆಗಳನ್ನು ಆರೋಪಿತರು ಸಂಗ್ರಹಿಸಿ ನ್ಯಾಯಾಲಯಕ್ಕೆ ಸಲ್ಲಿಸಬೇಕು.

ನಕಲಿ ಆಧಾರ್​ ಸಲ್ಲಿಸುವುದನ್ನು ತಡೆಯಲು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಅಗತ್ಯ ಸಹಕಾರ ನೀಡಬೇಕು. ಹಾಗೆಯೇ, ಅಗತ್ಯವಿರುವ ಸೌಲಭ್ಯಗಳು, ಉಪಕರಣಗಳು ಮತ್ತು ತಂತ್ರಜ್ಞಾನವನ್ನು ನ್ಯಾಯಾಲಯಗಳಿಗೆ ದೊರಕಿಸಿಕೊಡಬೇಕು.

ಶ್ಯೂರಿಟಿ ನೀಡುವವರ ಕುರಿತು ನ್ಯಾಯಾಲಯಗಳು ತಮ್ಮ ಸಾಫ್ಟವೇರ್ ನಲ್ಲಿ ಸಂಬಂಧಪಟ್ಟ ಪೊಲೀಸ್​ ಠಾಣೆಯ ಹೆಸರು, ಅಪರಾಧ ಸಂಖ್ಯೆ, ಆರೋಪಿತರ ಹೆಸರು ಸೇರಿದಂತೆ ವಿವರಗಳನ್ನು ದಾಖಲಿಸಿಕೊಳ್ಳಬೇಕು.

ಸಾಕ್ಷಿದಾರರ ಭಾವಚಿತ್ರ, ಸಹಿ, ಹೆಬ್ಬೆರಳಿನ ಗುರುತನ್ನು ಹಾಕಿ ದೃಢೀಕರಣ ಮಾಡಿರುವ ದಾಖಲೆ ಪರಿಗಣಿಸಬೇಕು. ಜತೆಗೆ, ಸ್ವಯಂ ದೃಢೀಕರಿಸಿರುವ ಆಧಾರ್ ಕಾರ್ಡ್‌ನ ನಕಲು ಪ್ರತಿ ಸಲ್ಲಿಸಬೇಕು.

ಉದ್ಯೋಗಿಯಾಗಿರುವ ವ್ಯಕ್ತಿ ಶ್ಯೂರಿಟಿ ನೀಡಿದಲ್ಲಿ ತಾನು ಕೆಲಸ ಮಾಡುತ್ತಿರುವ ಸಂಸ್ಥೆಯ ಐಡಿ ಹಾಗೂ ವೇತನ ಚೀಟಿ ಸಲ್ಲಿಸಬೇಕು. ಇದನ್ನು ಉದ್ಯೋಗದಾತ ಸಂಸ್ಥೆಯ ಉಸ್ತುವಾರಿ ಸಹಿಯೊಂದಿಗೆ ದೃಢೀಕರಿಸಿರಬೇಕು.

ಶ್ಯೂರಿಟಿಯನ್ನು ಪಡೆದುಕೊಳ್ಳುವ ಸಂದರ್ಭದಲ್ಲಿ ಸಹಿ, ಹೆಬ್ಬರಳಿನ ಗುರುತಿನ ಚೀಟಿ ಹಾಗೂ ಭಾವಚಿತ್ರದೊಂದಿಗಿನ ದಾಖಲೆಗಳನ್ನು ಪಡೆದುಕೊಳ್ಳಬೇಕು.

ನ್ಯಾಯಾಲಯಗಳು ಶ್ಯೂರಿಟಿದಾರನ ಸಂಪೂರ್ಣ ಹೆಸರು, ತಂದೆಯ ಹೆಸರು, ವಯಸ್ಸು, ವೃತ್ತಿ ಸೇರಿದಂತೆ ಸಂಪೂರ್ಣ ಅಂಚೆ ವಿಳಾಸವನ್ನು ದಾಖಲಿಸಿಕೊಳ್ಳಬೇಕು.

ಜಿಲ್ಲಾ ಪ್ರಧಾನ ನ್ಯಾಯಾಲಯಗಳ ನ್ಯಾಯಾಧೀಶರು ಮತ್ತು ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರು ವಾರ್ಷಿಕ ತಪಾಸಣೆ ವೇಳೆ ಜಾಮೀನುದಾರರ ನೊಂದಣಿಯನ್ನು ಪರಿಶೀಲನೆ ಮಾಡಬೇಕು. ವಿವಿಧ ಪ್ರಕರಣಗಳಲ್ಲಿ ಶ್ಯೂರಿಟಿದಾರರ ಹೇಳಿಕೆಗಳನ್ನು ಗಮನಿಸುತ್ತಿರಬೇಕು.

ಈ ಮಾರ್ಗಸೂಚಿಗಳ ಕುರಿತು ಹೈಕೋರ್ಟ್​ನ ರಿಜಿಸ್ಟ್ರಾರ್​ ಜನರಲ್​ ಅವರು ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳ ಅನುಮತಿ ಪಡೆದು ಕ್ರಿಮಿನಲ್​ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯಗಳಿಗೆ ಸುತ್ತೋಲೆ ಹೊರಡಿಸಬೇಕು. ನ್ಯಾಯಾಲಯಗಳ ಕಂಪ್ಯೂಟರ್​ ವಿಭಾಗದ ರಿಜಿಸ್ಟ್ರಾರ್​ ಅವರು ಸೆಂಟ್ರಲ್​ ಪ್ರೊಜಕ್ಟ್ಸ್​ ಕೋ-ಆರ್ಡಿನೇಟರ್​(ಸಿಪಿಸಿ) ಮೂಲಕ ಎಲ್ಲ ಮಾಹಿತಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು.

ಶ್ಯೂರಿಟಿ ನೀಡುವುದಕ್ಕೆ ಕೋರ್ಟುಗಳಿಗೆ ಬರುವವರು ಈ ಹಿಂದೆ ಯಾವುದಾದರೂ ಪ್ರಕರಣದಲ್ಲಿ ಶ್ಯೂರಿಟಿ ನೀಡಿದ್ದಾರೆಯೇ? ಎಂಬುದನ್ನು ಪರಿಶೀಲಿಸಬೇಕು. ಅಲ್ಲದೆ, ಶ್ಯೂರಿಟಿಗಾಗಿ ಪದೇಪದೆ ಹಾಜರಾಗಿದ್ದಾರೆಯೇ? ಎಂಬುದನ್ನು ಖಡಿತಪಡಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ಸೂಚಿಸಿದೆ.


Share It

You cannot copy content of this page