ಬೆಂಗಳೂರು: ಆರೋಗ್ಯಕರ ಸಮಾಜ ಬಲವಾದ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರದ ಅಡಿಪಾಯ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ.ನಡ್ಡಾ ಒತ್ತಿ ಹೇಳಿದರು.
ನಗರದ ನಿಮ್ಹಾನ್ಸ್ನಲ್ಲಿ ಶನಿವಾರ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (ಎಫ್ಎಸ್ಎಸ್ಎಐ) ಆಯೋಜಿಸಿದ್ದ ವಿಶ್ವ ಆಹಾರ ಸುರಕ್ಷತಾ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತೈಲದಲ್ಲಿ ಕರಿದ ಆಹಾರಗಳ ಸೇವನೆಯನ್ನು ಶೇಕಡಾ 10 ರಷ್ಟು ಕಡಿಮೆ ಮಾಡಲು ಪ್ರಧಾನಿ ನರೇಂದ್ರ ಮೋದಿ ನೀಡಿರುವ ಕರೆಯನ್ನು ನೆನೆದರು.
ಜನರು ತಮ್ಮ ಕ್ಯಾಲೋರಿ ಸೇವನೆಯ ಪ್ರಮಾಣದ ಮೇಲ್ವಿಚಾರಣೆ ಮಾಡಿಕೊಂಡು ಮತ್ತು ಸಮತೋಲಿತ ಆಹಾರ ಸೇವನೆಯ ಪದ್ಧತಿಯನ್ನು ಕಾಪಾಡಿಕೊಳ್ಳಬೇಕು. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಇತ್ತೀಚಿನ ಅಧ್ಯಯನದ ಪ್ರಕಾರ 2008 ಮತ್ತು 2020ರ ನಡುವೆ ಭಾರತದಲ್ಲಿ ಬೊಜ್ಜಿನ ಪ್ರಮಾಣ ನಗರ ಪ್ರದೇಶಗಳಲ್ಲಿ 39.6% ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 23.1%ಕ್ಕೆ ರಷ್ಟು ಏರಿದೆ. ವರದಿಯ ಪ್ರಕಾರ ಈಗಲೇ ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, 2050ರ ವೇಳೆಗೆ ಭಾರತದ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು ಬೊಜ್ಜು ಸಮಸ್ಯೆ ಎದುರಿಸುವ ಸಾಧ್ಯತೆ ಇದೆ ಎಂದು ಹೇಳಿದರು.
ಜಾಗೃತಿ ಅಭಿಯಾನದ ಭಾಗವಾಗಿ, ಜೆ.ಪಿ. ನಡ್ಡಾ “ಈಟ್ ರೈಟ್ ಆಕ್ಟಿವಿಟಿ ಪುಸ್ತಕ”ವನ್ನು ಬಿಡುಗಡೆ ಮಾಡಿದರು, ಇದನ್ನು ಶಿಕ್ಷಣ ಇಲಾಖೆಯ ಮೂಲಕ ಶಾಲಾ ಮಕ್ಕಳಿಗೆ ಮತ್ತು ರೈಲ್ವೆ ಮಂಡಳಿಯಿಂದ ಪ್ರಯಾಣಿಕರಿಗೆ ವಿತರಿಸಲಾಗಲಿದೆ. ಇನ್ನು ಸಮ್ಮೇಳನದಲ್ಲಿ ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ಪುಣ್ಯ ಸಲೀಲಾ ಶ್ರೀವಾಸ್ತವ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕಾರ್ಯದರ್ಶಿ ಸಂಜಯ್ ಕುಮಾರ್; ರೈಲ್ವೆ ಮಂಡಳಿಯ ಅಧ್ಯಕ್ಷ ಸತೀಶ್ ಕುಮಾರ್, ಎಫ್ಎಸ್ಎಸ್ಎಐ ಕಾರ್ಯನಿರ್ವಾಹಕ ನಿರ್ದೇಶಕ ಯು.ಎಸ್. ಧ್ಯಾನಿ ಉಪಸ್ಥಿತರಿದ್ದರು.