News

ಪ್ಲಾಸ್ಟಿಕ್ ಬಳಕೆಯನ್ನು ಆದಷ್ಟು ಕಡಿಮೆಮಾಡಿ: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಕಾಮೇಶ್ವರ ರಾವ್

Share It

ಬೆಂಗಳೂರು: ಪ್ಲಾಸ್ಟಿಕ್ ಬಳಕೆಯನ್ನು ಆದಷ್ಟು ಕಡಿಮೆಗೊಳಿಸಿ, ಪರಿಸರಕ್ಕೆ ಇದರಿಂದಾಗುವ ದುಷ್ಪರಿಣಾಮಗಳನ್ನು ಎಲ್ಲರೂ ಮನಗಾಣಬೇಕಿದೆ ಎಂದು ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಕಾಮೇಶ್ವರ ರಾವ್ ತಿಳಿಸಿದರು.

ಗುರುವಾರ ಕಬ್ಬನ್ ಪಾರ್ಕ್ ಬಾಲಭವನದಲ್ಲಿ ಕರ್ನಾಟಕ ಹೈಕೋರ್ಟ್, ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅರಣ್ಯ, ತೋಟಗಾರಿಕೆ ಇಲಾಖೆ ಹಾಗೂ ಬಿ.ಬಿ.ಎಂ.ಪಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಭೂಮಿ ಮಾನವನ ಅಗತ್ಯಗಳನ್ನು ಪೂರೈಸುವಷ್ಟು ಶಕ್ತವಾಗಿದೆ. ಆದರೆ ದುರಾಸೆಗಳನ್ನಲ್ಲ ಎಂದು ರಾಷ್ಟ್ರಪಿತ ಮಹಾತ್ಮಗಾಂಧಿ ಅವರು ದಶಕಗಳ ಹಿಂದೆಯೇ ತಿಳಿಸಿದ್ದರು. ನಾವು ಪ್ರತಿ ವರ್ಷ ಜೂನ್ 5 ರಂದು ವಿಶ್ವಪರಿಸರ ದಿನಾಚರಣೆಯನ್ನು ಆಚರಿಸುತ್ತೇವೆ. ಈ ಬಾರಿ ‘ಪ್ಲಾಸ್ಟಿಕ್ ನಿಂದಾಗುವ ಮಾಲಿನ್ಯ ಮುಕ್ತಗೊಳಿಸಿ” ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದರಿಂದ ಸಾರ್ವಜನಿಕರಿಗೆ ಅದರಲ್ಲೂ ಯುವಜನತೆಗೆ ಪ್ಲಾಸ್ಟಿಕ್ ನಿಂದ ದೇಹಕ್ಕೆ ಹಾಗೂ ಪರಿಸರಕ್ಕೆ ಆಗುವ ಹಾನಿಯನ್ನು ಮನದಟ್ಟು ಮಾಡಿಕೊಡಲಾಗುತ್ತಿದೆ ಎಂದರು.

ನೀರು, ಗಾಳಿ ಹೀಗೆ ಅನೇಕ ವಸ್ತುಗಳು ಮಲಿನಗೊಳ್ಳುತ್ತಿವೆ. ಜಾಗತಿಕ ತಾಪಮಾನದ ಬಿಸಿಯನ್ನು ನಾವು ಎದುರಿಸುತ್ತಿದ್ದೇವೆ. ಕಾಡು ನಾಶ ಮಾಡಿದರೆ, ಅದು ಪರಿಸರದ ಮೇಲೆ ಪ್ರತಿಕೂಲ ಪರಿಣಾಮವನ್ನು ಉಂಟುಮಾಡುತ್ತದೆ. 2024ರಲ್ಲಿ 400 ಮಿಲಿಯನ್ ಟನ್ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಗೊಂಡಿದ್ದು, 2060ರ ವೇಳೆಗೆ ಇದು ಮೂರು ಪಟ್ಟು ಹೆಚ್ಚಾಗಲಿದೆ. ಶೇ 10 ರಷ್ಟು ಪ್ಲಾಸ್ಟಿಕ್ ಮಾತ್ರ ಮರುಬಳಕೆಗೆ ಮಾಡಲಾಗುತ್ತಿದೆ. ಆದ್ದರಿಂದ ಪ್ಲಾಸ್ಟಿಕ್ ನಿಷೇಧ ಜಾಗತಿಕ ಮಟ್ಟದಲ್ಲೂ ಚರ್ಚೆಯಾಗುತ್ತಿದೆ. ಕೊರಿಯಾ ಮುಂತಾದ ರಾಷ್ಟ್ರಗಳು ಸಹ ಇದೇ ವಿಷಯವಾಗಿ ಜಾಗತಿಕ ಮಟ್ಟದ ಸಮಾವೇಶಗಳನ್ನು ಹಮ್ಮಿಕೊಂಡಿವೆ ಎಂದು ಮಾಹಿತಿ ನೀಡಿದರು.

ದೇಶದಲ್ಲಿ ಪ್ಲಾಸ್ಟಿಕ್ ನಿಷೇಧ ಕಾಯ್ದೆ ಬಂದರೂ ಸಹ ಇದರ ಉತ್ಪಾದನೆ ನಿಂತಿಲ್ಲ. ನಾವೇ ಸ್ವಯಂ ಪ್ರೇರಿತವಾಗಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು. ಇದಕ್ಕೆ ಯುವಜನರು, ವಿದ್ಯಾರ್ಥಿಗಳು ಸಹ ಕೈಜೋಡಿಸಬೇಕು. ಪಠ್ಯದಲ್ಲೂ ಸಹ ಪ್ಲಾಸ್ಟಿಕ್ ದುಷ್ಪರಿಣಾಮಗಳ ಬಗ್ಗೆ ತಿಳಿಹೇಳಬೇಕು. ಗಿಡ ಮರಗಳನ್ನು ಹೆಚ್ಚಾಗಿ ನೆಡುವುದರ ಮೂಲಕ ಪರಿಸರದ ಸಮತೋಲನ ಕಾಪಾಡಬೇಕು ಎಂದು ಮುಖ್ಯ ನ್ಯಾಯಮೂರ್ತಿ ಕಾಮೇಶ್ವರ ರಾವ್ ಕರೆ ನೀಡಿದರು.

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೀನಾಕ್ಷಿ ನೇಗಿ ಮಾತನಾಡಿ, ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸಿ, ಮುಂದೊಂದು ದಿನ ಅದನ್ನು ಸಂಪೂರ್ಣ ನಿಷೇಧಿಸಲು ಕಾರ್ಯೋನ್ಮುಖರಾಗಬೇಕು. ಇದು ಒಂದು ದಿನದ ಕೆಲಸವಾಗದೆ ಪ್ರತಿನಿತ್ಯದ ದಿನಬಳಕೆ ವಸ್ತುಗಳಲ್ಲಿ ಪ್ಲಾಸ್ಟಿಕ್ ಇರುವಿಕೆಯನ್ನು ಕಡಿಮೆಗೊಳಿಸಬೇಕು. ಆನ್‍ಲೈನ್ ವಸ್ತುಗಳ ವಿತರಣೆಯಲ್ಲಿ ಬಳಸುವ ಪ್ಲಾಸ್ಟಿಕ್ ಕವರ್, ಡಬ್ಬಗಳು ಹೀಗೆ ಅನೇಕ ಪ್ಲಾಸ್ಟಿಕ್ ವಸ್ತುಗಳ ಬಳಕೆ ಕಡಿಮೆ ಮಾಡಬೇಕು. ಇಂದಿನ ಸಮಾಜದಲ್ಲಿ ಇದು ಬರಿಯ ಹೇಳಿಕೆ, ಕಾಯ್ದೆಗಳಿಗೆ ಸೀಮಿತಗೊಳ್ಳದೆ ಕಾರ್ಯಾಚರಣೆಗೆ ಬರಬೇಕು. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಎಸೆಯುವುದರಿಂದ ಪರಿಸರಕ್ಕೆ ಉಂಟಾಗುವ ಹಾನಿಯ ಬಗ್ಗೆ ಜಾಗೃತಿ ವಹಿಸಬೇಕು ಎಂದರು.

ಹೈಕೋರ್ಟ್ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಮಾತನಾಡಿ, ವೃಕ್ಷಗಳನ್ನು ನಾವು ರಕ್ಷಿಸಿದರೆ ಮುಂದೆ ಅದು ನಮ್ಮನ್ನು ರಕ್ಷಿಸುತ್ತದೆ. ಸ್ವಚ್ಚ ಪರಿಸರದಲ್ಲಿರುವುದು ಎಲ್ಲರ ಹಕ್ಕಾಗಿದೆ. ಇದನ್ನು ಹಾನಿಗೊಳಿಸದಂತೆ ಜಾಗೃತಿ ವಹಿಸಬೇಕು. ದೇಶ, ರಾಜ್ಯ, ನಗರ, ಗ್ರಾಮ, ಬೀದಿ, ಮನೆ ಹೀಗೆ ಎಲ್ಲವನ್ನೂ ಸ್ವಚ್ಚವಾಗಿಟ್ಟುಕೊಳ್ಳಬೇಕು. ಪರಿಸರ ರಕ್ಷಣೆಯಾದರೆ ನಮಗೆ ಸ್ವಚ್ಚ ಗಾಳಿ, ನೀರು, ಆಹಾರ ಸಿಕ್ಕು ಆರೋಗ್ಯವಂತ ಸಮಾಜ ನಿರ್ಮಾಣಗೊಳ್ಳುತ್ತದೆ. ಕೃಷಿ ಭೂಮಿ ನಾಶವಾಗಿ ಈಗ ಬಡಾವಣೆಗಳು ತಲೆ ಎತ್ತುತ್ತಿವೆ. ಇದರಿಂದಾಗಿ ಪರಿಸರ ಮಾಲಿನ್ಯ ಹೆಚ್ಚುತ್ತಿದೆ. ಆದ್ದರಿಂದ ಪ್ಲಾಸ್ಟಿಕ್ ಬಳಕೆಯನ್ನು ಕಡಿವಾಣ ಹಾಕಲು ಸ್ವಯಂಪ್ರೇರಿತವಾಗೆ ಪಣ ತೊಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹೈಕೋರ್ಟ್ ರಿಜಿಸ್ಟ್ರಾರ್ ಕೆ.ಎಸ್. ಭರತ್ ಕುಮಾರ್, ಬೆಂಗಳೂರು ಸರ್ಕಲ್ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್, ತೋಟಗಾರಿಕೆ ನಿರ್ದೇಶಕ ಡಿ.ಎಸ್. ರಮೇಶ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು.


Share It

You cannot copy content of this page