ಬೆಂಗಳೂರು: 50 ವರ್ಷದ ಹಿಂದಿನ ಕರಾಳ ಅಧ್ಯಾಯ ತುರ್ತು ಪರಿಸ್ಥಿತಿಯಾಗಿದೆ. ಈ ಸಂದರ್ಭದಲ್ಲಿ ಯುವ ಮುಖಂಡನಾಗಿ ಹೋರಾಟ ನಡೆಸಿ ಯಶಸ್ವೀ ನಾಯಕರಾಗಿ ಹೊರಹೊಮ್ಮಿದವರಲ್ಲಿ ಮೋದಿಯವರು ಪ್ರಮುಖರಾಗಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.
ಜೆಪಿ ನಗರದ ಆರ್.ವಿ. ಡೆಂಟಲ್ ಕಾಲೇಜಿನ ಸಭಾಂಗಣದಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯ ಹೊರತಂದಿರುವ 1975-77ರ ತುರ್ತುಪರಿಸ್ಥಿತಿ ವಿರುದ್ಧ ಹೋರಾಟದ ಸತ್ಯಕಥೆ “ಭುಗಿಲು” ಪುಸ್ತಕದ ಮರು ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ರಾಷ್ಟ್ರದ ಬಹುತೇಕ ರಾಜಕೀಯ ವಿರೋಧಿಗಳೆಲ್ಲರೂ ಜೈಲು ಪಾಲಾದರು. ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದ್ದ ನನ್ನನ್ನು ಸೇರಿದಂತೆ ಹಲವು ಸಮಾಜವಾದಿ, ಕಮ್ಯುನಿಸ್ಟ್, ಆರ್.ಎಸ್.ಎಸ್ ಮುಖಂಡರನ್ನೂ ಜೈಲಿಗೆ ಕಳುಹಿಸಲಾಯಿತು. ಇದನ್ನೆಲ್ಲ ಉಲ್ಲೇಖಿಸಿ ಹೊಸ ರೂಪದಲ್ಲಿ ಪುಸ್ತಕವನ್ನು ಹೊರತಂದಿರುವುದು ಶ್ಲಾಘನೀಯ ಎಂದರು.
ಅಟಲ್ ಬಿಹಾರಿ ವಾಜಪೇಯಿ, ಎಲ್. ಕೆ. ಅಡ್ವಾಣಿ, ಜಯಪ್ರಕಾಶ್ ನಾರಾಯಣ್, ಮೊರಾರ್ಜಿ ದೇಸಾಯಿಯಂತಹ ವಿರೋಧ ಪಕ್ಷದ ನಾಯಕರನ್ನು ಬಂಧಿಸಲಾಯಿತು. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿರುವ ಮತ್ತು ತಮ್ಮ ರಾಜಕೀಯ ನಂಬಿಕೆಗಳ ಜತೆ ನಿಂತಿದ್ದ ಅನೇಕರಿಗೆ ಇದು ಆಘಾತಕಾರಿ ಸಮಯವಾಗಿತ್ತು. ಇದನ್ನೆಲ್ಲ ಮನಗಂಡು ಯುವ ಪೀಳಿಗೆ ಪ್ರಜಾಪ್ರಭುತ್ವವನ್ನು ಸಂರಕ್ಷಿಸಲು ತುರ್ತು ಪರಿಸ್ಥಿತಿ ಸಮಯದಲ್ಲಿ ಅನೇಕರು ಮಾಡಿದ ತ್ಯಾಗವನ್ನು ಸ್ಮರಿಸಬೇಕು ಎಂದು ಎಚ್.ಡಿ. ದೇವೇಗೌಡ ಮನವಿ ಮಾಡಿದರು.
ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ ಕಲ್ಲಡ್ಕ ಪ್ರಭಾಕರ್ ಭಟ್ ಮಾತಾನಾಡಿ, ಇಂದಿರಾಗಾಂಧಿ ಚುನಾವಣೆಯಲ್ಲಿ ಅಕ್ರಮ ಮಾಡಿದ್ದಾರೆ ಎನ್ನುವ ತೀರ್ಪು ಅಲಹಾಬಾದ್ ಹೈಕೋರ್ಟ್ ತೀರ್ಪು ಮತ್ತು ಅದನ್ನು ಸುಪ್ರೀಂ ಕೋರ್ಟ್ ಕೋರ್ಟ್ ಎತ್ತಿ ಹಿಡಿದ ಪರಿಣಾಮ ಜೂನ್ 25ರ ಮಧ್ಯ ರಾತ್ರಿ ರಾಷ್ಟ್ರಪತಿ ಫಕ್ರುದ್ದೀನ್ ಅಹಮದ್ ಅವರ ಸಹಿಯನ್ನು ಪಡೆದು ತುರ್ತು ಪರಿಸ್ಥಿತಿಯನ್ನು ಹೇರಲಾಯಿತು ಎಂದರು.
ಇಂದಿರಾ ಗಾಂಧಿ ತಾನು ದೇಶಕ್ಕಿಂತ ದೊಡ್ಡವಳು ಎನ್ನುವ ಅಹಂಕಾರದ ಸ್ವಾರ್ಥ ಭಾವ ತುರ್ತು ಪರಿಸ್ಥಿತಿಗೆ ಕಾರಣವಾಗಿದೆ ಎನ್ನುವುದನ್ನು ರಾಷ್ಟೀಯ ಸ್ವಯಂ ಸೇವಕ ಸಂಘ ಮನಗಂಡಿತು. ಸಂಘ ಇಂತಹ ವಿಷಮ ಪರಿಸ್ಥಿತಿಯಲ್ಲಿ ಸಹ ಸತ್ಯಾಗ್ರಹವನ್ನು ಹಮ್ಮಿಕೊಳ್ಳುವ ನಿರ್ಧಾರ ಕೈಗೊಂಡಿತ್ತು. ಈ ನಿರ್ಧಾರದ ಹಿಂದೆ ಗಂಡೆದೆಯ ಸ್ಪಯಂ ಸೇವಕರು ಕಾರಣರಾಗಿದ್ದರು. ಈಗಲೂ ತುರ್ತು ಪರಿಸ್ಥಿತಿಯ ಛಾಯೆ ರಾಜ್ಯದಲ್ಲಿ ಕಂಡುಬರುತ್ತಿದ್ದು, ಮರುಕಳಿಸದಂತೆ ತಡೆಯಲು ಜಾಗೃತಿ ಮುಖ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜಾಜಿನಗರ ಶಾಸಕ ಸುರೇಶ್ ಕುಮಾರ್, ನಿಜವಾದ ಹೋರಾಟ ಸಂಕಲನ ಭುಗಿಲು ಪುಸ್ತಕವಾಗಿದೆ. ಈ ಪುಸ್ತಕ ಪ್ರತಿಯೊಬ್ಬ ಪ್ರಜಾತಂತ್ರ ಪ್ರೇಮಿಯ ಮನೆಯಲ್ಲಿ ಇರಬೇಕಾದ ಪುಸ್ತಕವಾಗಿದೆ ಎಂದು ಹೇಳಿದರು.
ರಾಷ್ಟ್ರೋತ್ಥಾನ ಪರಿಷತ್ ಅಧ್ಯಕ್ಷರಾದ ಎಂ.ಪಿ ಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥತರಿದ್ದರು.