News

ಸಮೀಕ್ಷೆಯ ಕುರಿತು ಮಹಾಸಭಾ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧ: ಈಶ್ವರ ಖಂಡ್ರೆ

Share It

ಬೆಂಗಳೂರು: ಸೆಪ್ಟೆಂಬರ್ 20ರಿಂದ ಆರಂಭವಾಗಲಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ವೀರಶೈವ- ಲಿಂಗಾಯತ ಸಮುದಾಯದ ನೈಜ ಸಂಖ್ಯೆ ತಿಳಿಯುವ ನಿಟ್ಟಿನಲ್ಲಿ ಮಹಾಸಭಾ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು.

ಶುಕ್ರವಾರ ಬೆಂಗಳೂರಿನಲ್ಲಿ ನೆಡೆದ ಸಭೆಯ ಬಳಿಕ ವಿವರ ನೀಡಿದ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ, ವಯೋಸಹಜ ಅನಾರೋಗ್ಯದ ಕಾರಣ ಶಾಮನೂರು ಶಿವಶಂಕರಪ್ಪ ಅವರು ಸಭೆಗೆ ಗೈರಾಗಿದ್ದರು. ಆದ್ದರಿಂದ ನನ್ನ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮಾಜದ ಬಾಂಧವರು ಧರ್ಮ, ಜಾತಿಯ ಕಾಲಂನಲ್ಲಿ ಏನೆಂದು ಬರಸಬೇಕು ಎನ್ನುವ ಬಗ್ಗೆ ಚರ್ಚಿಸಲಾಯಿತು ಎಂದರು.

ಸಮಾಜದ ಎಲ್ಲರೂ ವೀರಶೈವ ಅಥವಾ ಲಿಂಗಾಯತ ಎಂದು ನಮೂದಿಸಲು ಮನವಿ ಮಾಡುವ ನಿಟ್ಟಿನಲ್ಲಿ ಜನಾಭಿಪ್ರಾಯ ಮೂಡಿಸಲು ಉನ್ನತಮಟ್ಟದ ಸಮಿತಿ ರಚಿಸಿ, ಮಠಾಧಿಪತಿಗಳೊಂದಿಗೆ ಚರ್ಚಿಸಿ ಕಾರ್ಯರೂಪಕ್ಕೆ ತರಲು ಸಭೆ ತೀರ್ಮಾನಿಸಿದೆ. ಇದು ರಾಜಕೀಯ ಸಭೆಯಲ್ಲ, ಸಮಾಜದ ಜನರ ಹಿತ ಕಾಯುವ ಸಂಕಲ್ಪದೊಂದಿಗೆ ಎಲ್ಲ ಪಕ್ಷಗಳ ಲಿಂಗಾಯತ, ವೀರಶೈವ ಶಾಸಕರ ಸೇರಿ ಸಭೆ ನಡೆಸಲಾಗಿದೆ. ಮುಂಬರುವ ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆಯಲ್ಲಿ ವೀರಶೈವ ಲಿಂಗಾಯತರ ನೈಜ ಸಂಖ್ಯೆ ಹೊರಹೊಮ್ಮುವಂತೆ ಮಾಡುವುದೇ ಸಭೆಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಎಲ್ಲ ಜನಪ್ರತಿನಿಧಿಗಳು, ಸಮಾಜದ ಮಠಾಧಿಪತಿಗಳು, ಹರ, ಚರ ಗುರು ಮೂರ್ತಿಗಳ ಸಹಯೋಗದೊಂದಿಗೆ ಸಮಾಜದ ಜನರಲ್ಲಿ ಜಾಗೃತಿ ಮೂಡಿಸುವ ಬಗ್ಗೆ ಪಕ್ಷಾತೀತವಾಗಿ ಚರ್ಚಿಸಲಾಯಿತು ಎಂದು ಹೇಳಿದರು.

ವೀರಶೈವ ಲಿಂಗಾಯತ ಸಮುದಾಯ ಮೊದಲಿನಿಂದಲೂ ಸರ್ವರಿಗೂ ಲೇಸು ಬಯಸುವ ಸಮುದಾಯವಾಗಿದೆ. ಸಮ ಸಮಾಜದ ಕಲ್ಪನೆ ಕೊಟ್ಟಿದ್ದೇ ನಮ್ಮ ಸಮುದಾಯ. ಯಾವುದೇ ಜಾತಿಯ ಜನರ ಅರ್ಹ ಹಕ್ಕನ್ನು ಕಸಿದುಕೊಳ್ಳುವ ಉದ್ದೇಶ ನಮಿಗಿಲ್ಲ. ಆದರೆ ನಮ್ಮ ಸಮಾಜಕ್ಕೂ ಅನ್ಯಾಯವಾಗದಂತೆ ಸಮಾಜದ ಇಂದಿನ ಸ್ಥಿತಿ-ಗತಿ ಮತ್ತು ಸಂಖ್ಯೆಯನ್ನು ನಿಖರವಾಗಿ ಪಡೆಯಬೇಕಿದೆ ಎಂದು ತಿಳಿಸಿದರು.

ಸಭೆಯಲ್ಲಿ ಬೃಹತ್ ಕೈಗಾರಿಕೆ ಮತ್ತು ಮೂಲಸೌಕರ್ಯಾಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಮಾತನಾಡಿ, ಒಳ ಪಂಗಡಗಳ ಹೆಸರನ್ನಷ್ಟೇ ಬರಸದೆ ಎಲ್ಲರೂ ಧರ್ಮದ ಕಾಲಂನಲ್ಲಿ ಲಿಂಗಾಯತ ಅಥವಾ ವೀರಶೈವ ಎಂದೂ ಉಪ ಜಾತಿಯ ಕಾಲಂನಲ್ಲಿ ಒಳ ಪಂಗಡದ ಹೆಸರು ಬರೆಸುವಂತೆ ಅರಿವು ಮೂಡಿಸಬೇಕು ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ಜಾತಿಯ ಹೆಸರು ಬರೆಸುವ ವಿಚಾರದಲ್ಲಿ ಗೊಂದಲ ಉಂಟಾಗಿದ್ದು, ಇದರ ನಿವಾರಣೆಗೆ ಸಮಾಜದ ಎಲ್ಲ ಬಾಂಧವರಿಗೆ ಸರಿಯಾದ ಮಾಹಿತಿ ರವಾನಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಮಹಾಸಭಾದ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದು ಪ್ರತಿಪಾದಿಸಿದರು.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಮುಂದಿನ ತಿಂಗಳಿನಿಂದಲೇ ಸಮೀಕ್ಷೆ ಆರಂಭವಾಗಲಿದ್ದು, ಸಮಯಾವಕಾಶ ಕಡಿಮೆ ಇರುವ ಹಿನ್ನೆಲೆಯಲ್ಲಿ ತತ್ ಕ್ಷಣವೇ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.

ಸಂಸತ್ ಸದಸ್ಯ ಪ್ರಭಾಕರ ಕೋರೆ ಮಾತನಾಡಿ, ನಮ್ಮ ಸಮಾಜದ ವಿವಿಧ ಸಂಘಟನೆಗಳಿದ್ದು, ಅದರ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಮೊದಲಿಗೆ ಈ ಬಗ್ಗೆ ಮಾಹಿತಿ ನೀಡಿ ಇದನ್ನು ಸಮಾಜದ ಎಲ್ಲರಿಗೂ ತಲುಪಿಸುವ ಮೂಲಕ ಸಮೀಕ್ಷೆಯಲ್ಲಿ ಲಿಂಗಾಯತ ಅಥವಾ ವೀರಶೈವ ಎಂದು ಬರೆಸಲು ಮನವಿ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಚಿವರುಗಳಾದ ದರ್ಶನಾಪೂರ, ಶರಣಪ್ರಕಾಶ್ ಪಾಟೀಲ್, ಎಸ್.ಎಸ್. ಮಲ್ಲಿಕಾರ್ಜುನ್, ಶಿವಾನಂದ ಪಾಟೀಲ್, ಶಾಸಕರುಗಳಾದ ಬಿ.ಆರ್. ಪಾಟೀಲ್, ಬಸವರಾಜ ರಾಯರೆಡ್ಡಿ, ಎಂ.ವೈ ಪಾಟೀಲ್, ಶಿವಾನಂದ ಕಾಶೆಪ್ಪನವರ್, ಗಣೇಶ್ ಹುಕ್ಕೇರಿ, ಸಿ.ಎಸ್. ನಾಡಗೌಡ, ಅಪ್ಪಾಜಿ ನಾಡಗೌಡ, ಗಣೇಶ್ ಪ್ರಸಾದ್, ಶಿವಗಂಗ ಬಸವರಾಜ್, ಜಿ.ಎಸ್. ಪಾಟೀಲ್, ಶರಣಗೌಡ ಕುಂದಕೂರ, ಬಾಬಾ ಸಾಹೇಬ್ ಪಾಟೀಲ್, ಶಾಂತನಗೌಡರ್, ತಮ್ಮಯ್ಯ, ಯುಬಿ ಬಣಕಾರ್, ಅಲ್ಲಮಪ್ರಭು ಪಾಟೀಲ್, ರಾಜು ಕಾಗೆ, ಷಡಕ್ಷರಿ, ಲತಾ ಮಲ್ಲಿಕಾರ್ಜುನ್, ಅಶೋಕ್ ಮನಗೂಳಿ, ಶಿವಾನಂದ ಕೌಜಲಗಿ, ಡಾ. ಶೈಲೇಂದ್ರ ಬೆಲ್ದಾಳೆ, ಅರವಿಂದ ಬೆಲ್ಲದ್, ಬಿ.ಪಿ. ಹರೀಶ್, ಜ್ಯೋತಿ ಗಣೇಶ್, ಭೀಮರಾವ್ ಪಾಟೀಲ್, ಡಾ. ಚಂದ್ರಶೇಖರ ಪಾಟೀಲ್, ಶರಣು ಸಲಗಾರ್ ಸೇರಿದಂತೆ 50ಕ್ಕೂ ಹೆಚ್ಚು ಶಾಸಕರು ಹಾಗೂ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ್ ಬಿದರಿ ಮತ್ತು ನಿವೃತ್ತ ನ್ಯಾಯಮೂರ್ತಿ ಸುಭಾಷ್ ಆಡಿ ಮತ್ತಿತರರು ಪಾಲ್ಗೊಂಡಿದ್ದರು.


Share It

You cannot copy content of this page