ಬೆಂಗಳೂರು: ಖ್ಯಾತ ಚಿತ್ರನಟ ದಿವಂಗತ ಟಿ.ಎನ್. ಬಾಲಕೃಷ್ಣ ಅವರಿಗೆ ಸ್ಟುಡಿಯೋ ನಿರ್ಮಾಣಕ್ಕಾಗಿ ಮಂಜೂರು ಮಾಡುವಾಗ ವಿಧಿಸಿದ್ದ ಷರತ್ತುಗಳ ಉಲ್ಲಂಘನೆಯಾಗಿದ್ದು, ಈ ಭೂಮಿಯನ್ನು ಅರಣ್ಯ ಇಲಾಖೆಗೆ ಮರಳಿಸಲು ಪತ್ರ ಬರೆಯಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಸ್ಪಷ್ಟಪಡಿಸಿದರು.
ವಿಕಾಸೌಧದಲ್ಲಿ ಡಾ.ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಅವರಿಂದ ವಿಷ್ಣುವರ್ಧನ್ ಸ್ಮಾರಕ ಕುರಿತಂತೆ ಮನವಿ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಲಸಂದ್ರ ಗ್ರಾಮದ ಸರ್ವೆ ನಂ.26 ರಲ್ಲಿ 62 ಎಕರೆ 20 ಗುಂಟೆ ಪ್ರದೇಶವನ್ನು ತುರಹಳ್ಳಿ ರಾಜ್ಯ ಅರಣ್ಯ ಎಂದು ಘೋಷಸಿ ಮೈಸೂರು ಸರ್ಕಾರ 1935ರಲ್ಲಿ ಅಧಿಸೂಚನೆ ಹೊರಡಿಸಿತ್ತು. 1980ರ ಅರಣ್ಯ ಸಂರಕ್ಷಣಾ ಕಾಯಿದೆ ಜಾರಿಗೆ ಬರುವ ಮೊದಲು ಈ ಅರಣ್ಯ ಭೂಮಿಯ ಪೈಕಿ 20 ಎಕರೆ ಪ್ರದೇಶವನ್ನು ಖ್ಯಾತ ಚಿತ್ರನಟ ಟಿ.ಎನ್.ಬಾಲಕೃಷ್ಣ ಅವರಿಗೆ ಸ್ಟುಡಿಯೋ ನಿರ್ಮಿಸುವ ಸಲುವಾಗಿ 1969 ಒಂದು ಎಕರೆಗೆ ರೂ.300 ರಂತೆ ಒಟ್ಟು 6,000 ರೂಗಳಿಗೆ 20 ಎಕರೆ ಪ್ರದೇಶವನ್ನು ಷರತ್ತುಬದ್ಧವಾಗಿ ಮಂಜೂರು ಮಾಡಲಾಗಿತ್ತು ಎಂದು ತಿಳಿಸಿದರು.
2003ರಲ್ಲಿ 10 ಎಕರೆ ಪ್ರದೇಶವನ್ನು ದಿವಂಗತ ಬಾಲಕೃಷ್ಣ ಅವರ ಮಕ್ಕಳು ಸರ್ಕಾರದಿಂದ ಪೂರ್ವಾನುಮತಿ ಪಡೆದು ಮಾರಾಟ ಮಾಡಿರುತ್ತಾರೆ. ಮಾರಾಟಕ್ಕೆ ಅನುಮತಿ ನೀಡುವ ಸಂದರ್ಭದಲ್ಲಿಯೂ ಮಾರಾಟದಿಂದ ಬಂದ ಹಣದಿಂದ ಸ್ಟುಡಿಯೋ ಅಭಿವೃದ್ಧಿ ಪಡಿಸುವಂತೆ ಮತ್ತೆ ಷರತ್ತು ಹಾಕಲಾಗಿತ್ತು. ಆದರೆ ಈವರೆಗೆ ಯಾವುದೇ ಅಭಿವೃದ್ಧಿ ಆಗಿಲ್ಲ. ಬದಲಾಗಿ ಈಗ ಉಳಿದ 10 ಎಕರೆ ಜಮೀನ್ನೂ ಮಾರಾಟ ಮಾಡಲು ಮುಂದಾಗಿರುವುದು ಷರತ್ತಿನ ಉಲ್ಲಂಘನೆಯಾಗಿದ್ದು, ಆದ್ದರಿಂದ ಅರಣ್ಯ ಭೂಮಿಯನ್ನು ಇಲಾಖೆಗೆ ಮರಳಿಸುವಂತೆ ಕಂದಾಯ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದರು.
ಸಸ್ಯೋದ್ಯಾನ ನಿರ್ಮಾಣ:
ಬೆಂಗಳೂರು ವ್ಯಾಪಕವಾಗಿ ಬೆಳೆದಿದ್ದು, ಶ್ವಾಸತಾಣಗಳ ಅಗತ್ಯವಿದೆ. ಈ ಜಮೀನು ಇಲಾಖೆಗೆ ಮರಳಿ ಬಂದರೆ ಅಲ್ಲಿ ಒಂದು ಸಸ್ಯೋದ್ಯಾನ ನಿರ್ಮಿಸಲಾಗುವುದು. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಪೀಠ ಕಳೆದ ಕೂಡ ಮೇ 15ರಂದು ಕಂದಾಯ ಇಲಾಖೆ ವಶದಲ್ಲಿರುವ ಅರಣ್ಯ ಭೂಮಿಯನ್ನು ಯಾವುದೇ ಸಂಸ್ಥೆ, ವ್ಯಕ್ತಿಗಳಿಗೆ ಮಂಜೂರು ಮತ್ತು ಗುತ್ತಿಗೆ ನೀಡಿದ್ದರೆ, ಅನ್ಯ ಉದ್ದೇಶಕ್ಕೆ ಬಳಕೆಯಾಗುತ್ತಿದ್ದರೆ, ಅದರ ಪರಿಶೀಲನೆಗೆ ವಿಶೇಷ ತನಿಖಾ ತಂಡ ರಚಿಸುವಂತೆ ಸೂಚಿಸಿದೆ ಎಂದು ತಿಳಿಸಿದರು.
ಸರ್ಕಾರದಿಂದ ವಿಷ್ಣುವರ್ಧನ್ ಸ್ಮಾರಕದ ತೀರ್ಮಾನ:
ಡಾ. ವಿಷ್ಣುವರ್ಧನ್ ಅವರ ಸ್ಮಾರಕಕ್ಕೆ ಜಮೀನು ನೀಡಲಾಗುವುದೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಸರ್ಕಾರ ನಿಯಮಾನುಸಾರ ತೀರ್ಮಾನ ಕೈಗೊಳ್ಳುತ್ತದೆ ಎಂದು ಈಶ್ವರ್ ಖಂಡ್ರೆ ಸ್ಪಷ್ಟಪಡಿಸಿದರು.