ಬೆಂಗಳೂರು: ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶೆಯಾಗಿ ತಾರಾ ವಿತಾಸ್ತ ಗಂಜು ಮಂಗಳವಾರ ಹೈಕೋರ್ಟ್ ಸಭಾಂಗಣದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಮುಖ್ಯ ನ್ಯಾಯಾಧೀಶ ವಿಭು ಬಖ್ರು ಪ್ರಮಾಣ ವಚನ ಬೋಧಿಸಿದರು.
ಪ್ರಮಾಣ ವಚನ ಬೋಧನಾ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ಅಧ್ಯಕ್ಷ ಮಿತ್ತಲ್ ಕೋಡ್ ನೂತನ ನ್ಯಾಯಾಮೂರ್ತಿಗಳನ್ನು ಸ್ವಾಗತಿಸಿ ಮಾತನಾಡಿ ಬಾರ್ ಕೌನ್ಸಿಲ್ ಪರವಾಗಿ ಮತ್ತು ವೈಯುಕ್ತಿಕವಾಗಿ ಹೃತ್ಪೂರ್ವ ಸ್ವಾಗತ ಕೋರಿದರು. ಕಾನೂನು ಮತ್ತು ಸಮಾನತೆಯ ನ್ಯಾಯ ಒದಗಿಸುವ ಪ್ರಯತ್ನದಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಬೆಂಗಳೂರು, ಧಾರವಾಡ ಹಾಗೂ ಕಲಬುರಗಿ ವಿಭಾಗೀಯ ಪೀಠದ ನ್ಯಾಯಾಧೀಶ, ಅಡ್ವೋಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ. ಅರವಿಂದ್ ಕಾಮತ್, ಸಹಾಯಕ ಸಾಲಿಸಿಟರ್ ಜನರಲ್, ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ಉಪಾಧ್ಯಕ್ಷ ಬಿ. ವಿನಯ್, ಹಿರಿಯ ವಕೀಲರು ಮತ್ತಿತರರು ಉಪಸ್ಥಿತರಿದ್ದರು.
ದೆಹಲಿಯಲ್ಲಿ ವಕೀಲೆಯಾಗಿ ಸೇವೆ:
ತಾರಾ ವಿತಾಸ್ತ ಗಂಜು ಅವರು 1971 ರ ಆಗಸ್ಟ್ 12 ರಂದು ನವದೆಹಲಿಯಲ್ಲಿ ಜನಿಸಿದ್ದರು. 1989 ರಲ್ಲಿ ನವದೆಹಲಿಯ ಲೋಧಿ ಎಸ್ಟೇಟ್ನಲ್ಲಿರುವ ಸರ್ದಾರ್ ಪಟೇಲ್ ವಿದ್ಯಾಲಯದಲ್ಲಿ ಪ್ರೌಢಶಾಲಾ ವ್ಯಾಸಂಗ ಪೂರೈಸಿ 1992 ರಲ್ಲಿ ದೆಹಲಿ ವಿಶ್ವವಿದ್ಯಾಲಯದ ಲೇಡಿ ಶ್ರೀರಾಮ್ ಕಾಲೇಜಿನಲ್ಲಿ ರಾಜಕೀಯ ವಿಜ್ಞಾನದಲ್ಲಿ ಪದವಿ ಪಡೆದರು. ನಂತರ 1995 ರಲ್ಲಿ ದೆಹಲಿ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪೂರೈಸಿದರು. 1995 ರ ಆಗಸ್ಟ್ 3 ರಿಂದ ದೆಹಲಿಯ ಬಾರ್ ಕೌನ್ಸಿಲ್ನಲ್ಲಿ ವಕೀಲೆಯಾಗಿ ಸೇವೆ ಸಲ್ಲಿಸಿದರು.
ಹೈಕೋರ್ಟ್ ನ್ಯಾಯಾಧೀಶೆಯಾಗಿ ನೇಮಕ:
ತಾರಾ ವಿತಾಸ್ತ ಗಂಜು ಅವರು 2022 ರ ಮೇ 18 ರಂದು ದೆಹಲಿ ಹೈಕೋರ್ಟ್ ಶಾಶ್ವತ ನ್ಯಾಯಾಧೀಶೆಯಾಗಿ ನೇಮಿಕಗೊಂಡಿದ್ದರು. 3 ವರ್ಷಗಳಿಗೂ ಹೆಚ್ಚು ಕಾಲ ದೆಹಲಿ ಹೈಕೋರ್ಟ್ನಲ್ಲಿ ಸೇವೆ ಸಲ್ಲಿಸಿದ ನಂತರ, ಕರ್ನಾಟಕದ ಹೈಕೋರ್ಟ್ ಗೆ ವರ್ಗಾವಣೆಯಾಗಿದ್ದಾರೆ.

