ಬೆಂಗಳೂರು: ಮೂರು ದಿನಗಳ ಕಾಲ ನಡೆದ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ ಕೊನೆಯ ದಿನವಾದ ಗುರುವಾರ ರಾಜ್ಯ ಸರ್ಕಾರ ಮತ್ತು ನವೋದ್ಯಮಗಳಲ್ಲಿ ಹೂಡಿಕೆ ಮಾಡುವವರಿಂದ ಡೀಪ್ಟೆಕ್ ನವೋದ್ಯಮಗಳಿಗೆ 400 ಕೋಟಿ ನೆರವನ್ನು ಘೋಷಿಸಲಾಯಿತು.
ಇದರಿಂದ ಡೀಪ್ಟೆಕ್ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನವೋದ್ಯಮಗಳಿಗೆ ಇದೇ ಮೊದಲ ಬಾರಿಗೆ ಗಮನಾರ್ಹ ಮೊತ್ತದ ನೆರವು ದೊರೆತಂತಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಪ್ರಿಯಾಂಕ್ ಖರ್ಗೆ, ಭವಿಷ್ಯದ ಹತ್ತು ವರ್ಷಗಳು ವೈಜ್ಞಾನಿಕ ನಾವೀನ್ಯತೆ ಆಧರಿಸಿದ ತಂತ್ರಜ್ಞಾನಗಳಾದ ಕೃತಕ ಬುದ್ದಿಮತ್ತೆ, ರೋಬೊಟಿಕ್ಸ್, ಕ್ವಾಂಟಂ ಕಂಪ್ಯೂಟಿಂಗ್ ಮತ್ತು ಜೈವಿಕ ತಂತ್ರಜ್ಞಾನಗಳ ದಶಕವಾಗಿರಲಿದ್ದು, ಬೆಂಗಳೂರಿನ ಟೆಕ್ ಸಮ್ಮೇಳನ ಅದಕ್ಕೆ ಮುನ್ನುಡಿ ಬರೆದಿದೆ ಎಂದು ಅಭಿಪ್ರಾಯಪಟ್ಟರು.
ತುಮಕೂರು ರಸ್ತೆಯಲ್ಲಿನ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ಮೂರು ದಿನಗಳಿಂದ ನಡೆದ ಬೆಂಗಳೂರು ಟೆಕ್ ಮೇಳದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಅವಕಾಶಗಳು ಹಾಗೂ ಮಾರುಕಟ್ಟೆಗಳನ್ನು ಸೃಷ್ಟಿಸುವಲ್ಲಿ ಮತ್ತು ಡೀಪ್ಟೆಕ್ ಕ್ಷೇತ್ರಗಳಲ್ಲಿನ ಆವಿಷ್ಕಾರಗಳನ್ನು, ಮಾರುಕಟ್ಟೆ ಅವಕಾಶಗಳ ಮಹತ್ವ ಮನದಟ್ಟು ಮಾಡಿಕೊಡುವಲ್ಲಿ ಶೃಂಗಸಭೆಯು ಗಮನಾರ್ಹ ಯಶಸ್ಸು ಸಾಧಿಸಿದೆ ಎಂದು ವ್ಯಾಖ್ಯಾನಿಸದರು.
ಡೀಪ್ಟೆಕ್ ಬರೀ ಕರ್ನಾಟಕಕ್ಕೆ, ಭಾರತಕ್ಕೆ ಸೀಮಿತವಾಗಿರದೆ ಇಡೀ ವಿಶ್ವಕ್ಕೆ ದೊರೆಯಲಿದೆ. ವೆಂಚರ್ ಕ್ಯಾಪಿಟಲಿಸ್ಟ್ ಹೂಡಿಕೆದಾರರು ಸರ್ಕಾರದ ಜೊತೆ ಕೈಜೋಡಿಸಲು ಮುಂದೆ ಬಂದಿರುವುದು ಸ್ವಾಗತಾರ್ಹವಾಗಿದೆ. ನವೋದ್ಯಮಗಳಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಕರ್ನಾಟಕ ಜಾಗತಿಕ ನವೋದ್ಯಮಗಳಲ್ಲಿ ಮುಂಚೂಣಿ ಐದನೆ ಸ್ಥಾನ ಗಳಿಸುವ ಮಹತ್ವಾಕಾಂಕ್ಷೆ ಸಾಕಾರಗೊಳ್ಳಲು ಟೆಕ್ ಸಮ್ಮಿಟ್ ಮಹತ್ವದ ಪಾತ್ರ ಮಹತ್ವದ್ದಾಗಿದೆ ಎಂದರು.
ಸಮಾರೋಪ ಸಮಾರಂಭದಲ್ಲಿ ಗಗನಯಾನಿ ಶುಭಾಂಶು ಶುಕ್ಲಾ ಮಾತನಾಡಿ, ಮುಂಬರುವ ವರ್ಷಗಳಲ್ಲಿ ಭಾರತವು ಬಾಹ್ಯಾಂತರಿಕ್ಷ ಕಾರ್ಯಕ್ರಮಗಳಲ್ಲಿ ಗಮನಾರ್ಹವಾಗಿ ತೊಡಗಿಕೊಳ್ಳಲಿದೆ. ಈ ಕ್ಷೇತ್ರದಲ್ಲಿನ ಭಾರತದ ಭವಿಷ್ಯ ಪ್ರಖರವಾಗಿದೆ. ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಗಗನಯಾನ ಕೈಗೊಳ್ಳಿದ್ದಾರೆ. ಈ ಕ್ಷೇತ್ರದಲ್ಲಿನ ನವೋದ್ಯಮಗಳಿಗೆ ಉಜ್ವಲ ಭವಿಷ್ಯ ಇದೆ. ದೇಶದ 300 ನವೋದ್ಯಮಗಳು ಈಗಾಗಲೇ ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮುಂಬರುವ ವರ್ಷಗಳಲ್ಲಿ ಇಂತಹ ನವೋದ್ಯಮಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚಲಿದೆ ಎಂದು ಅಭಿಪ್ರಾಯಪಟ್ಟರು.
ಲೇಖಕ ಅಂಕೂರ್ ವಾರಿಕು ಅವರು ಮಾತನಾಡಿ, ನವೋದ್ಯಮಗಳಿಗೆ ವಿಶ್ವಾಸಾರ್ಹತೆಯೇ ಮುಖ್ಯ . ಉದ್ಯೋಗಿಗಳು, ಗ್ರಾಹಕರು, ಸರ್ಕಾರದ ಜೊತೆ ವಿಶ್ವಾಸಾರ್ಹತೆಯಿಂದ ವರ್ತಿಸುವುದನ್ನು ರೂಢಿಸಿಕೊಂಡರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಟಾಟಾ ಬ್ರ್ಯಾಂಡ್ ಯಶಸ್ಸಿಗೆ ಅದರ ವಿಶ್ವಾಸಾರ್ಹತೆ ಮಂತ್ರವೇ ಮುಖ್ಯ ಕಾರಣ. ಉದ್ಯಮದ ವಹಿವಾಟಿನಲ್ಲಿ ವಿಶ್ವಾಸಾರ್ಹತೆ ರೂಢಿಸಿಕೊಂಡರೆ ಹಣ,ಸಂಪತ್ತು ಯಶಸ್ಸು ತನ್ನಷ್ಟಕ್ಕೆ ತಾವೇ ಹಿಂಬಾಲಿಸಿಕೊಂಡು ಬರುತ್ತವೆ ಎಂದು ಕಿವಿಮಾತು ಹೇಳಿದರು.
ಟೆನಿಸ್ ತಾರೆ ಸಾನಿಯಾ ಮಿರ್ಜಾ ಮಾತನಾಡಿ, ಕ್ರೀಡಾಂಗಣದಲ್ಲಿ ಒತ್ತಡವನ್ನು ಸಮಚಿತ್ತದಿಂದ ಎದುರಿಸಿದರೆ ಸೋಲನ್ನೂ ಗೆಲುವಾಗಿ ಬದಲಾಯಿಸಬಹುದು. ಕ್ರೀಡೆಯಲ್ಲಿನ ಸೋಲು ಹಲವಾರು ಪಾಠ ಕಲಿಸುತ್ತದೆ. ಯಾವುದೇ ಕ್ಷೇತ್ರದಲ್ಲಿರಲಿ ಸೋಲಿನಿಂದ ಧೃತಿಗೆಡಬಾರದು ಎಂದು ಪ್ರೇರೇಪಿಸಿದರು.
ಕಾರ್ಯಕ್ರಮದಲ್ಲಿ ಕಿಯೊನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ, ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ.ಎನ್.ಮಂಜುಳ, ನಿರ್ದೇಶಕ ರಾಹಲ್ ಸಂಕನೂರ್ ಇದ್ದರು.

