ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಸಿದ್ರಾಮಣ್ಣ ನಡೆದು ಬಂದ ದಾರಿ ಮರೆತಿದ್ದಾರೆ. ಇದು ಅವರಿಗೆ ಅವರೇ ಮಾಡಿಕೊಳ್ಳುತ್ತಿರುವ ಅನ್ಯಾಯವಾಗಿದೆ. ಆದರೆ ಅವರು ಹಿರಿಯರು, ಅನುಭವಿಗಳು ಎನ್ನುವುದನ್ನು ಗೌರವಿಸುತ್ತೇವೆ ಎಂದು ನಿಖಿಲ್ ಕುಮಾರಸ್ವಾಮಿ ಕುಟುಕಿದರು.
ಶನಿವಾರ ಜೆಡಿಎಸ್ 25 ವರ್ಷಗಳ ರಜತ ಮಹೋತ್ಸವ ಸಂಭ್ರಮಾಚರಣೆ ಅಂಗವಾಗಿ ಪಕ್ಷದ ರಾಜ್ಯ ಕಛೇರಿ ಜೆ.ಪಿ. ಭವನದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಮಹಾ ಅಧಿವೇಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನತಾಪರಿವಾರದಲ್ಲಿ ಅಂದು ದೊಡ್ಡ ದೊಡ್ಡ ನಾಯಕರಿದ್ದರು. ಅವರೆಲ್ಲರನ್ನು ಬಿಟ್ಟು ಸಿದ್ದರಾಮಯ್ಯ ಅವರಿಗೆ ಹಣಕಾಸು ಬಜೆಟ್ ಮಂಡನೆ ಮಾಡಿಸುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದು ದೇವೇಗೌಡರು. ಇದು ಪಕ್ಷ ಮಾಡಿಕೊಟ್ಟ ಅವಕಾಶವಾಗಿತ್ತು. ಉಪಮುಖ್ಯಮಂತ್ರಿಯ ಸ್ಥಾನಕ್ಕೆ ಕರೆದುಕೊಂಡು ಹೋಗಿದ್ದು ಕೂಡ ಇದೇ ದೇವೇಗೌಡರು. ಈಗ ನಡೆದು ಬಂದ ದಾರಿ ಮರೆತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ದೇವೇಗೌಡರಿಗೆ ಮಾತ್ರ ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಬದ್ಧತೆ ದೃಷ್ಟಿಯಲ್ಲಿ, ಎಲ್ಲರನ್ನು ಸಮಾನತೆ ದೃಷ್ಟಿಯಿಂದ ಬೆಳೆಸುವ ಗುಣವಿದೆ. ಈಗ ಸಿದ್ರಾಮಣ್ಣ ಪಕ್ಷದ ಬಗ್ಗೆ ಲಘುವಾಗಿ ಮಾತನಾಡುತ್ತಾರೆ. ಅವರು ಬೆಳೆದು ಬಂದ ದಾರಿ ಮರೆತಿದ್ದಾರೆ. ಅವರಿಗೆ ದೇವರು ಒಳ್ಳೇದು ಮಾಡಲಿ ಎಂದು ಹೇಳಿದರು.
ದೇವೇಗೌಡರು ಈ ವಯಸ್ಸಿನಲ್ಲೂ ಅವರ ಜೀವನ ಸಾರ್ವಜನಿಕ ಸೇವೆಗೆ ಮೂಡುಪಾಗಿಟಿದ್ದಾರೆ. ದೇಶದ ಇತಿಹಾಸದಲ್ಲೆ ಇಂಥ ವ್ಯಕ್ತಿತ್ವವನ್ನು ನಾವು ಹಿಂದೆ ನೋಡಿಲ್ಲ, ಮುಂದೆ ನೋಡುವುದಿಲ್ಲ. ದೇವೇಗೌಡರು ನಮ್ಮಂತ ಯುವಕರಿಗೆ ಸ್ಫೂರ್ತಿ. ಎಲ್ಲರೂ ಪಕ್ಷತೀತವಾಗಿ ಅವರನ್ನು ಆರಾಧಿಸುತ್ತಾರೆ. ಈ ಹಿನ್ನಲೆಯಲ್ಲಿ ಕುಮಾರಣ್ಣ ಅವರ ಮಗನಾಗಿ ಹುಟ್ಟಿರುವುದೇ ನನ್ನ ಸೌಭಾಗ್ಯ ಎಂದು ಭಾವುಕಾರಾದರು.
ಈ ಕಾರ್ಯಕ್ರಮ ಎಲ್ಲಿ ಬೇಕಾದರೂ ಮಾಡಬಹುದಿತ್ತು. ಆದರೆ ಜೆ.ಪಿ ಭವನ ನಮಗೆಲ್ಲಾ ದೇವಾಲಯ ಆದ್ದರಿಂದ ಇಲ್ಲಿ ರಜತ ಮಹೋತ್ಸವ ಆಚರಣೆ ಮಾಡಬೇಕು ಎಂದು ಕುಮಾರಣ್ಣ ಹೇಳಿದ್ದರು. ರೈತರು ಈ ರಾಜ್ಯದಲ್ಲಿ ಉಳಿಯಬೇಕಾದರೆ ಕುಮಾರಣ್ಣ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು ಎಂದು ಒತ್ತಿ ಹೇಳಿದರು.
ಎರಡೂ ರಾಷ್ಟೀಯ ಪಕ್ಷದಲ್ಲೂ ದುರ್ಬಿನ್ ಹಾಕಿ ಹುಡುಕಿದರೂ. ಜೆಡಿಎಸ್ ಪಕ್ಷದಲ್ಲಿರುವಂತ ನಿಷ್ಠಾವಂತ ಕಾರ್ಯಕರ್ತರು ಸಿಗುವುದಿಲ್ಲ. ಇದು ದೇವಗೌಡರು ಹಾಗೂ ಕುಮಾರಣ್ಣ ಅವರು ಸಂಪಾದನೆ ಮಾಡಿರುವುದು ಆಸ್ತಿ. ನನಗೆ ಇರುವ ಗುರಿ ಕುಮಾರಣ್ಣನನ್ನು ರಾಜ್ಯದ ಮುಖ್ಯಮಂತ್ರಿಯಾಗಿ ಮತ್ತೆ ಮಾಡಬೇಕು ಎನ್ನುವುದಾಗಿದೆ ಎಂದು ಹೇಳಿದರು.
ದೇವೇಗೌಡರಿಗೆ ಇರುವುದು ಒಂದೇ ಆಸೆಯಾಗಿರುವ ಜೆಡಿಎಸ್ ಪಕ್ಷವನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ನಾವೆಲ್ಲರೂ ಹೋರಾಟ ಮಾಡೋಣ. ಜನತಾದಳ ಸದಸ್ಯತ್ವದ ಅಭಿಯಾನದಲ್ಲಿ ಶೇ 30% ರಿಂದ 40% ಅಷ್ಟೇ ಗುರಿ ಮುಟ್ಟಿದ್ದೇವೆ. ಈ ಹಿನ್ನಲೆಯಲ್ಲಿ ಮತ್ತಷ್ಟು ಚುರುಕಾಗಿ ಕೆಲಸ ಮಾಡಬೇಕು ಎಂದು ಕಾರ್ಯಕರ್ತರಿಗೆ ತಿಳಿಸಿದರು.
ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವೊಂದು 25 ನೇ ವರ್ಷಾಚರಣೆ ಮಾಡುತ್ತಿರುವುದು ರಾಜ್ಯದ ರಾಜಕೀಯ ಇತಿಹಾಸದಲ್ಲಿಯೆ ಇದೆ ಮಾಡಲಾಗಿದೆ. ಪಕ್ಷದ ಬೆಳವಣಿಗೆಗಾಗಿ ತನು, ಮನ, ಧನ ಎಲ್ಲವನ್ನೂ ಅರ್ಪಿಸಿ, ಹೋರಾಟ ಮಾಡಿ, ಕೇಸ್ ಗಳನ್ನು ಹಾಕಿಸಿಕೊಂಡು ಪ್ರತಿ ಬೂತ್ ನಲ್ಲಿ ಜೆಡಿಎಸ್ ಧ್ವಜವನ್ನು ಹಾರಿಸಿದ ಚಿನ್ನದಂತಹ ಕಾರ್ಯಕರ್ತರಿಂದ ಇದು ಸಾಧ್ಯವಾಗಿದೆ. ಈ ಸಂದರ್ಭದಲ್ಲಿ ಇಷ್ಟು ವರ್ಷಗಳ ಕಾಲ ನೆಲ, ಜಲ, ಭಾಷೆಗಾಗಿ ಹೋರಾಟ ಮಾಡುತ್ತಾ ಬಂದಿರುವ ಮಾಜಿ ಪ್ರಧಾನಮಂತ್ರಿ ದೇವೇಗೌಡರು ಹಾಗೂ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ರೈತರ ಪರವಾಗಿ ಆಡಳಿತ ಮಾಡಿದ ಕುಮಾರಣ್ಣನವರ ಕೊಡುಗೆಯನ್ನು ನಾವೆಲ್ಲರೂ ಸ್ಮರಿಸಬೇಕು ಎಂದು ನಿಖಿಲ್ ಹೇಳಿದರು.
ರಜತ ಮಹೋತ್ಸವ ಕಾರ್ಯಕ್ರಮ ನಾಡಿನೆಲ್ಲಡೆ ಆಚರಿಸೋಣ:
ಈ ರಜತ ಮಹೋತ್ಸವ ಕಾರ್ಯಕ್ರಮವನ್ನು ನಾಡಿನೆಲ್ಲಡೆ ಆಚರಿಸೋಣ, ಈವರೆಗೆ 52 ವಿಧಾನಸಭಾ ಕ್ಷೇತ್ರದಲ್ಲಿ ಜನರೊಂದಿಗೆ ಜನತಾಳ ಕಾರ್ಯಕ್ರಮ ಮಾಡಿದ್ದೇನೆ ಮುಂಬರುವ ದಿನಗಳಲ್ಲಿ ಎರಡನೇ ಹಂತದ ಪ್ರವಾಸದ ಮೂಲಕ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ಆಗಮಿಸುತ್ತೇನೆ. ಮುಂಬರುವ 2028 ರ ಚುನಾವಣೆಯಲ್ಲಿ ನಾವು ಈ ಹಿಂದೆ ಗೆದ್ದ 58 ಸ್ಥಾನಗಳನ್ನು ಮೀರಿ ಗೆಲ್ಲಬೇಕಾಗಿದ್ದು, ಅದಕ್ಕಾಗಿ ನಾವೆಲ್ಲರೂ ಬಲಿಷ್ಠವಾಗಿ ಪಕ್ಷ ಕಟ್ಟೋಣ. ಮತ್ತೊಮ್ಮೆ ಕುಮಾರಣ್ಣನವರನ್ನು ಮುಖ್ಯಮಂತ್ರಿಗಳಾಗಿ ಆಯ್ಕೆ ಮಾಡೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ರವರು, ಕೋರ ಕಮೀಟಿ ಅಧ್ಯಕ್ಷ ಜೆ.ಕೆ. ಕೃಷ್ಣಾರೆಡ್ಡಿ, ಸಂಸದ ಮಲ್ಲೇಶ್ ಬಾಬು, ವಿವಿಧ ರಾಜ್ಯಗಳ ಪ್ರತಿನಿಧಿಗಳು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ವಿಧಾನಪರಿಷತ್ ಸದಸ್ಯರು, ಜಿಲ್ಲಾ ಘಟಕಗಳ ಅಧ್ಯಕ್ಷರು ಹಾಗೂ ಆಹ್ವಾನಿತ ನಾಯಕರು ಮತ್ತು ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

