Education News

ಸಹಾಯಧನ ಪಡೆಯುವುದು ಶಿಕ್ಷಣ ಸಂಸ್ಥೆಗಳ ಮೂಲಭೂತ ಹಕ್ಕಲ್ಲ: ಸುಪ್ರೀಂಕೋರ್ಟ್

Share It

ಸರ್ಕಾರದಿಂದ ಸಹಾಯಧನ ಪಡೆದುಕೊಳ್ಳುವುದು ಶಿಕ್ಷಣ ಸಂಸ್ಥೆಗಳ ಮೂಲಭೂತ ಹಕ್ಕಲ್ಲ. ಸಹಾಯಧನ ನೀಡುವುದು ರಾಜ್ಯಗಳ ನೀತಿ ನಿರ್ಣಯಕ್ಕೆ ಬಿಟ್ಟ ವಿಚಾರವಾಗಿದೆ ಎಂದು ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ.

ಅನುದಾನಿತ ಶಾಲೆಗಳ ನಿರ್ದಿಷ್ಟ ಸಿಬ್ಬಂದಿ ನೇಮಕಾತಿಯನ್ನು ರದ್ದುಪಡಿಸಿದ್ದ ಉತ್ತರ ಪ್ರದೇಶ ಸರ್ಕಾರದ ನಿರ್ಧಾರವನ್ನು ಅಲಹಾಬಾದ್ ಹೈಕೋರ್ಟ್ 2018ರಲ್ಲಿ ಅಸಂವಿಧಾನಿಕ ಎಂದು ಘೋಷಿಸಿ, ರದ್ದುಪಡಿಸಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಸ್.ಕೆ ಕೌಲ್ ಹಾಗೂ ನ್ಯಾ. ಎಂ.ಎಂ ಸುಂದ್ರೇಶ್ ಅವರಿದ್ದ ಪೀಠ ಶಿಕ್ಷಣ ಸಂಸ್ಥೆಗಳು ಸಹಾಯಧನ ಪಡೆಯುವುದು ಮೂಲಭೂತ ಹಕ್ಕಲ್ಲ ಎಂದು ತಿಳಿಸಿ, ಹೈಕೋರ್ಟ್ ಆದೇಶವನ್ನು ವಜಾ ಮಾಡಿದೆ.

ಶಿಕ್ಷಣ ಸಂಸ್ಥೆಗಳ ಕಾರ್ಯವಿಧಾನ ಹಾಗೂ ಅವುಗಳು ಹೊಂದಿರುವ ಸವಲತ್ತುಗಳನ್ನು ಆಧರಿಸಿ ಸರ್ಕಾರಗಳು ನೆರವು ನೀಡುವುದನ್ನು ನಿರ್ಧರಿಸುತ್ತವೆ. ಅದನ್ನು ಕಡ್ಡಾಯವಾಗಿ ಕೇಳಿಪಡೆಯಲು ಶಿಕ್ಷಣ ಸಂಸ್ಥೆಗಳಿಗೆ ಹಕ್ಕಿಲ್ಲ. ಮಾನ್ಯತೆ ಪಡೆದ ಅನುದಾನಿತ ಶಿಕ್ಷಣ ಸಂಸ್ಥೆಗಳ ವಿಚಾರಕ್ಕೆ ಬಂದಾಗ ಅಲ್ಪಸಂಖ್ಯಾತ ಸಂಸ್ಥೆ ಹಾಗೂ ಅಲ್ಪಸಂಖ್ಯಾತೇತರ ಸಂಸ್ಥೆ ಎಂದು ತಾರತಮ್ಯ ಮಾಡುವಂತಿಲ್ಲ. ನಿಯಮ ಪಾಲನೆಯಲ್ಲಿ ಎಲ್ಲ ಸಂಸ್ಥೆಗಳನ್ನು ಸಮಾನವಾಗಿ ಕಾಣಬೇಕು ಎಂದು ಸೂಚಿಸಿದೆ.

ಇನ್ನು ಶಿಕ್ಷಣ ಸಂಸ್ಥೆಗಳಿಗೆ ಅನುದಾನ ನೀಡುವುದು ಸರ್ಕಾರದ ನೀತಿ ನಿರ್ಣಯಕ್ಕೆ ಬಿಟ್ಟ ವಿಚಾರ. ಅನುದಾನ ನೀಡುವ ವೇಳೆ ಸರ್ಕಾರ ಶಿಕ್ಷಣ ಸಂಸ್ಥೆಯ ಹಿತಾಸಕ್ತಿ ಜತೆಗೆ ತನ್ನ ಆರ್ಥಿಕ ಸಾಮರ್ಥ್ಯವನ್ನು ಪರಿಗಣಿಸುತ್ತದೆ. ಅನುದಾನ ಪಡೆಯುವ ಶಾಲೆಗಳು ಸರ್ಕಾರದ ನಿಬಂಧನೆಗಳನ್ನು ಪಾಲಿಸಬೇಕಾಗುತ್ತದೆ. ಒಂದೊಮ್ಮೆ ಪಾಲಿಸದಿದ್ದಾಗ ಅಥವಾ ಸಂಸ್ಥೆಯ ಲೋಪ ಆಧರಿಸಿ ಸರ್ಕಾರ ಸಹಾಯಧನ ನಿಲ್ಲಿಸಿದರೆ ಅದನ್ನು ಪ್ರಶ್ನಿಸಿಲು ಶಿಕ್ಷಣ ಸಂಸ್ಥೆಗಳಿಗೆ ಹಕ್ಕಿಲ್ಲ. ಆದರೆ, ತಾರತಮ್ಯವನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಬಹುದು ಎಂದು ಸ್ಪಷ್ಟಪಡಿಸಿದೆ.


Share It

You cannot copy content of this page