News

ಪ್ರಾಣಿಗಳ ಜೀವನಶೈಲಿ ಅಭಿವೃದ್ಧಿ ರೈತರ ಆರ್ಥಿಕತೆ, ಉದ್ಯಮಶೀಲತೆಗೆ ದಾರಿ: ಪಶು ಸಂಗೋಪನಾ ಸಚಿವ ವೆಂಕಟೇಶ್

Share It

ಬೆಂಗಳೂರು: ಪ್ರಾಣಿಗಳ ಜೀವನಶೈಲಿ ಅಭಿವೃದ್ಧಿಯು ರೈತರಿಗೆ ಆರ್ಥಿಕವಾಗಿ ಹಾಗೂ ಉದ್ಯಮಶೀಲತೆಗೆ ದಾರಿಯಾಗಲಿದೆ ಎಂದು ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್ ಹೇಳಿದರು.

ಶನಿವಾರ ಹೆಬ್ಬಾಳದಲ್ಲಿರುವ ಕರ್ನಾಟಕ ಪಶುವೈದ್ಯಕೀಯ ಪರಿಷತ್ತಿನ ಸಭಾಂಗಣದಲ್ಲಿ, ಕರ್ನಾಟಕ ಸರ್ಕಾರದ ಪಶು ಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆಯು ರಾಷ್ಟ್ರೀಯ ವೈಜ್ಞಾನಿಕ ಸಮಾವೇಶ ಮತ್ತು 22ನೇ ರಾಷ್ಟ್ರೀಯ ಪಶುವೈದ್ಯಕೀಯ ವಿಜ್ಞಾನ ವಿದ್ವನ್ಮಂಡಲಿ ಸಮಾರಂಭವನ್ನು ಆಯೋಜಿಸಿತ್ತು. ಅತ್ಯುತ್ತಮ ಜಾನುವಾರು, ಕೋಳಿ ಸಾಕಣೆ, ಆರೋಗ್ಯ ರಕ್ಷಣೆ ಮತ್ತು ಉತ್ಪಾದನೆ ಹಾಗೂ ಸಾಕುಪ್ರಾಣಿಗಳ ಪೋಷಣೆಗೆ “ಸವಾಲುಗಳು ಮತ್ತು ಆದ್ಯತೆ” ವಿಷಯದಡಿ ನಡೆದ ಈ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಕುಪ್ರಾಣಿಗಳ ಆಹಾರ ಪದ್ಧತಿ ಹವಾಮಾನಕ್ಕೆ ಅನುಗುಣವಾಗಿ ಬದಲಾಗುತ್ತಿದ್ದು, ಇದರ ಪರಿಣಾಮವಾಗಿ ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಈ ಸವಾಲುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಮತ್ತು ಸಾಕುಪ್ರಾಣಿಗಳ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಎರಡು ದಿನಗಳ ಈ ಸಮಾವೇಶವು ರೈತರಿಗೆ ಮಾರ್ಗದರ್ಶನ ನೀಡಲಿದೆ. ಸಣ್ಣ ಉದ್ಯಮಶೀಲತೆಯ ಉತ್ತೇಜನ ಮತ್ತು ಪಶುಪಾಲಕರ ಲಾಭದಾಯಕ ಅಭಿವೃದ್ಧಿಯ ದೃಷ್ಟಿಯಿಂದ ಈ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಸಿ. ವೀರಣ್ಣ, ನವದೆಹಲಿ ಪ್ರಾಣಿ ವಿಜ್ಞಾನ ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಕೃಷಿ ಉಪ ಮಹಾನಿರ್ದೇಶಕ ಡಾ. ರಾಘವೇಂದ್ರ ಭಟ್, ಭಾರತೀಯ ಪಶುವೈದ್ಯಕೀಯ ಪರಿಷತ್ತಿನ ಅಧ್ಯಕ್ಷ ಡಾ. ಉಮೇಶ್ ಚಂದ್ರ ಶರ್ಮ, ರಾಷ್ಟ್ರೀಯ ಪಶುವೈದ್ಯಕೀಯ ವಿಜ್ಞಾನ ವಿದ್ವನ್ಮಂಡಲಿ ಪೋಷಕರಾದ ಡಾ. ಕೆ.ಎಂ. ಬುಜರ್ಬರುವಾ, ಪಶುವೈದ್ಯಕೀಯ ಮಹಾವಿದ್ಯಾಲಯದ ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿಗಳು ಸೇರಿದಂತೆ ಅನೇಕ ಗಣ್ಯರು ಮತ್ತು ವೃತ್ತಿಪರರು ಉಪಸ್ಥಿತರಿದ್ದರು.


Share It

You cannot copy content of this page