ಪುತ್ತೂರು ಮೂಲದ ಖ್ಯಾತ ನ್ಯಾಯವಾದಿ ಹಾಗೂ ರಾಜ್ಯ ಸರ್ಕಾರದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿರುವ ಹಿರಿಯ ವಕೀಲ ಅರುಣ ಶ್ಯಾಮ್ ಎಂ. ಅವರಿಗೆ ಡಾಕ್ಟರೇಟ್ ಪದವಿ ನೀಡಲಾಗಿದೆ.
ಅರುಣ್ ಶ್ಯಾಮ್ ಅವರು ಕಾನೂನು ವಿಷಯದಲ್ಲಿ ಪಿ.ಎಚ್.ಡಿ ಅಧ್ಯಯನ ಮಾಡಿ ಮಂಡಿಸಿದ ಮಹಾಪ್ರಬಂಧವನ್ನು ಪರಿಗಣಿಸಿ ಬೆಂಗಳೂರಿನ ಅಲಯನ್ಸ್ ವಿವಿಯು ‘ಡಾಕ್ಟರ್ ಆಫ್ ಫಿಲಾಸಫಿ ಇನ್ ಲಾ’ ಪದವಿ ನೀಡಿ ಗೌರವಿಸಿದೆ.
ಹಿರಿಯ ವಕೀಲ ಅರುಣ್ ಶ್ಯಾಮ್ ”A critical Study of Inherent Powers of High Courts in Admininstration of Criminal Justice in India” ವಿಷಯದಲ್ಲಿ ಮಹಾಪ್ರಬಂಧ ಮಂಡನೆ ಮಾಡಿದ್ದರು.
ಮೂಲತಃ ಬಂಟ್ವಾಳದ ಪಂಜಿಗದ್ದೆಯವರಾದ ವಕೀಲ ಅರುಣ್ ಶ್ಯಾಮ್ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದು, ಶಿವಮೊಗ್ಗದ ನ್ಯಾಷನಲ್ ಲಾ ಕಾಲೇಜಿನಿಂದ ಎಲ್ಎಲ್ಎಂ ಪದವಿ ಪಡೆದಿದ್ದಾರೆ. ಇದೀಗ ಮಹಾಪ್ರಬಂಧ ಮಂಡಿಸಿ ಡಾಕ್ಟರೇಟ್ ಗಳಿಸಿದ್ದಾರೆ.
2006 ರಿಂದ ನ್ಯಾಯವಾದಿಯಾಗಿ ಸೇವೆ ಸಲ್ಲಿಸುತ್ತಿರುವ ಅರುಣ್ ಶ್ಯಾಮ್ ಅವರಿಗೆ ಕಳೆದ ವರ್ಷ ಹೈಕೋರ್ಟ್ ಹಿರಿಯ ವಕೀಲರಾಗಿ ಪದೋನ್ನತಿ ನೀಡಿತ್ತು. 2020ರ ಸೆಪ್ಟೆಂಬರ್ 8ರಿಂದ ರಾಜ್ಯ ಸರ್ಕಾರದ ಹೆಚ್ಚುವರಿ ಅಡ್ವೊಕೇಟ್ ಜನರಲ್-1 ಆಗಿ ಸೇವೆ ಸಲ್ಲಿಸುತ್ತಿರುವ ಇವರು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ಅಕಾಡೆಮಿಕ್ ಕೌನ್ಸಿಲ್ ಸದಸ್ಯರೂ ಆಗಿದ್ದಾರೆ.